– ‘ಸಿಎಸ್ಪಿ ಮಂಡ್ಯ’ ಹೊಸ ಆ್ಯಪ್ ಗೆ ಚಾಲನೆ
ಮಂಡ್ಯ: ಮಾಜಿ ಸಂಸದೆ ರಮ್ಯಾ ನಂತರ ಇದೀಗ ಹಾಲಿ ಸಂಸದ ಪುಟ್ಟರಾಜು ಸಾಮಾಜಿಕ ಜಾಲತಾಣದ ಮೂಲಕ ಮತದಾರರನ್ನು ತಲಪುವ ಪ್ರಯತ್ನ ಮಾಡುತ್ತಿದ್ದಾರೆ.
ಇಂದು ಅಧಿಕೃತವಾಗಿ ಪುಟ್ಟರಾಜು ತಮ್ಮ ಫೇಸ್ಬುಕ್, ಟ್ವಿಟ್ಟರ್ ಖಾತೆಗೆ ಮಂಡ್ಯ ಸಂಸದರ ಕಚೇರಿಯಲ್ಲಿ ಚಾಲನೆ ನೀಡಿದರು. ಫೇಸ್ಬುಕ್, ಟ್ವಿಟರ್ ಖಾತೆ ಬಳಸದವರಿಗಾಗಿ `ಸಿಎಸ್ಪಿ ಮಂಡ್ಯ’ ಎಂಬ ಹೊಸ ಆ್ಯಪ್ ಕೂಡ ಓಪನ್ ಮಾಡಲಾಗಿದೆ.
ಸಾಮಾಜಿಕ ಜಾಲತಾಣಗಳ ಮೂಲಕ ಮಂಡ್ಯ ಜನ ತಮ್ಮ ಸಮಸ್ಯೆ ಹೇಳಿಕೊಳ್ಳಬಹುದು. ತಮ್ಮ ಅಮೂಲ್ಯ ಸಲಹೆ ಇದ್ದರೆ ಅದನ್ನು ಕೂಡ ಸಾಮಾಜಿಕ ಜಾಲತಾಣಗಳ ಮೂಲಕ ನೀಡಬಹುದು. ತಮ್ಮ ಸಮಸ್ಯೆಗೆ ತಕ್ಷಣ ಸ್ಪಂದಿಸುತ್ತೇನೆ ಅಂತ ಪುಟ್ಟರಾಜು ಹೇಳಿದ್ರು.
ಇದೇ ಸಂದರ್ಭದಲ್ಲಿ ಮಾಜಿ ಸಂಸದೆ ರಮ್ಯಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದರೂ ಜಿಲ್ಲೆಯಲ್ಲಿ ಮಾತ್ರ ಲಭ್ಯರಿಲ್ಲ ಎಂಬ ಬಗ್ಗೆ ಪ್ರಶ್ನಿಸಿದಾಗ ಅದರ ಬಗ್ಗೆ ಮಾತನಾಡಲು ನಿರಾಕರಿಸಿದ ಪುಟ್ಟರಾಜು, ಬೇರೆಯವರ ವಿಚಾರ ಪ್ರಸ್ತಾಪ ಮಾಡುವ ಅಗತ್ಯವಿಲ್ಲ. ನನ್ನ ಮೊಬೈಲ್ ನಂಬರ್ ಪ್ರತಿ ಮನೆಯಲ್ಲೂ ಇದೆ. ಯಾವಾಗ ಕರೆ ಮಾಡಿದರೂ ರಿಸೀವ್ ಮಾಡಿ ಜನರ ಸಮಸ್ಯೆ ಆಲಿಸುತ್ತೇನೆ ಎಂದರು.
ಜಿ.ಟಿ. ದೇವೇಗೌಡರ ಬಗ್ಗೆ ಮಾತನಾಡಿ, ಅವರು ನಮ್ಮ ಮನೆಯ ಹಿರಿಯ ಮಗನಿದ್ದಂತೆ. ಎಲ್ಲ ಸಮಸ್ಯೆಗಳನ್ನೂ ಕೂತು ಬಗೆಹರಿಸಿಕೊಳ್ಳುತ್ತೇವೆ. ನಾವು ಪ್ರತಿನಿತ್ಯ ಅವರ ಸಂಪರ್ಕದಲ್ಲಿದ್ದೇವೆ. ಕೆಲವೊಂದು ನ್ಯೂನತೆಗಳ ಬಗ್ಗೆ ಹೇಳುತ್ತಿದ್ದಾರೆ. ಎಲ್ಲವನ್ನೂ ಸರಿಪಡಿಸಿಕೊಂಡು ಒಟ್ಟಿಗೆ ಹೋಗುತ್ತೇವೆ ಅಂದ್ರು.
ಇನ್ನು ಸಂಸದರು ಸಾಮಾಜಿಕ ಜಾಲತಾಣಗಳ ಮೂಲಕ ಜನರ ಸಮಸ್ಯೆ ಆಲಿಸಲು ಹೊರಟಿರುವ ಬಗ್ಗೆ ಜಿಲ್ಲೆಯ ಜನರು ಸ್ವಾಗತಿಸಿದ್ದು, ಮಾಜಿ ಸಂಸದೆ ರಮ್ಯಾ ರೀತಿ ಬರೀ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಸಕ್ರಿಯರಾಗಿರದೆ ಜಿಲ್ಲೆಯ ಜನರ ಮಧ್ಯೆಯಿದ್ದು ಕೆಲಸವನ್ನೂ ಮಾಡಬೇಕು ಎಂದು ಸಲಹೆ ನೀಡಿದರು.