ಬೆಂಗಳೂರು: ನಗರದಲ್ಲಿರುವ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ(ಸಿಆರ್ಪಿಎಫ್) ಕೇಂದ್ರ ಕಚೇರಿಯನ್ನು ಉತ್ತರಪ್ರದೇಶಕ್ಕೆ ಶಿಫ್ಟ್ ಮಾಡುವುದಕ್ಕೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಇಡೀ ದೇಶಾದ್ಯಂತ ಎಲ್ಲೇ ಕಾನೂನು ಸುವ್ಯವಸ್ಥೆಗೆ ಹದಗೆಟ್ಟರೂ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಸಿಆರ್ಪಿಎಫ್ ಯೋಧರು ಅತಂಕದಲ್ಲಿದ್ದಾರೆ. ಹೌದು ಕೇಂದ್ರ ಸರ್ಕಾರ ಅನುಸರಿಸುತ್ತಿರುವ ಮಲ ತಾಯಿ ದೋರಣೆಯೇ ಇದಕ್ಕೆ ಪ್ರಮುಖ ಕಾರಣವಾಗಿದೆ.
ಸದ್ಯ ಬೆಂಗಳೂರಿನ ತರಳು ಹಾಗೂ ಯಲಹಂಕಲ್ಲಿರುವ ಎರಡು ಸಿಆರ್ಪಿಎಫ್ ಗ್ರೂಪ್ ಕೇಂದ್ರಗಳಲ್ಲಿ ಒಂದನ್ನು ಯಾವುದೇ ಕಾರಣ ನೀಡದೇ ಕೇಂದ್ರ ಸರ್ಕಾರ ಉತ್ತರಪ್ರದೇಶದ ಚಂದೋಲಿ ಪ್ರದೇಶಕ್ಕೆ ಶಿಫ್ಟ್ ಮಾಡುವುದಕ್ಕೆ ಚಿಂತನೆ ನಡೆಸಿದೆ.
ಈಗಾಗಲೇ ಉತ್ತರ ಪ್ರದೇಶದಲ್ಲಿ ಐದು ಸಿಆರ್ಪಿಎಫ್ ಗ್ರೂಪ್ ಸೆಂಟರ್ಗಳಿವೆ. ಪ್ರಸ್ತುತ ಕೇಂದ್ರ ಸರ್ಕಾರ ಶಿಪ್ಟ್ ಮಾಡಲು ನಿರ್ಧಾರಿಸಿರುವ ಪ್ರದೇಶ ಕೇಂದ್ರ ಗೃಹಮಂತ್ರಿ ರಾಜನಾಥ್ ಸಿಂಗ್ ಅವರ ಸ್ವಕ್ಷೇತ್ರವಾಗಿದೆ. ಹೀಗಾಗಿ ಕೇಂದ್ರದ ನಿರ್ಧಾರಕ್ಕೆ ರಾಜ್ಯದಲ್ಲಿ ತೀವ್ರ ಆಕ್ಷೇಪ ಎದ್ದಿದೆ.
ಕೇಂದ್ರ ಈ ನಿರ್ಣಯದಿಂದ ಉತ್ತರ ಪ್ರದೇಶಕ್ಕೆ ಐದು ಸಿಆರ್ಪಿಎಫ್ ಕೇಂದ್ರಗಳ ಅವಶ್ಯಕತೆಯಾದರೂ ಏಕೆ ಎನ್ನುವ ಪ್ರಶ್ನೆ ಉದ್ಭವಿಸಿದೆ. ಅಲ್ಲದೇ ಸಿಆರ್ಪಿಎಫ್ ಕೇಂದ್ರವನ್ನು ಶಿಫ್ಟ್ ಮಾಡುವುದರಿಂದ ಕರ್ನಾಟಕದ ಮೂಲದ ಸಿಆರ್ಪಿಎಫ್ ಪೊಲೀಸರು, ತಮ್ಮ ಕುಟುಂಬಗಳ ಸಮೇತ ಉತ್ತರಪ್ರದೇಶಕ್ಕೆ ಶಿಫ್ಟ್ ಆಗಬೇಕಾಗುತ್ತದೆ.
ಕೇಂದ್ರದ ಚಿಂತನೆಯ ಕುರಿತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ಡಿ ಕುಮಾರ ಸ್ವಾಮಿ ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದಿದ್ದು, ಸಿಆರ್ಪಿಎಫ್ ಕೇಂದ್ರವನ್ನು ಸ್ಥಾಪನೆ ಮಾಡುವುದಕ್ಕಾಗಿ ರಾಜ್ಯ ಸರ್ಕಾರವು 230 ಎಕರೆ ಭೂಮಿಯನ್ನು ಮಂಜೂರು ಮಾಡಿದೆ. ಅಲ್ಲದೇ ಈ ಕೇಂದ್ರವನ್ನು ಆಧರಿಸಿರುವ ಸುಮಾರು 15 ಸಾವಿರ ಕನ್ನಡಿಗರಿಗೆ ಇದರಿಂದ ಅನ್ಯಾಯವಾಗುತ್ತದೆ ಎಂದು ವಿವರಿಸಿದ್ದಾರೆ.
ಇನ್ನೂಳಿದಂತೆ ಕರ್ನಾಟಕ ಎಲ್ಲಾ ರಾಜಕೀಯ ನಾಯಕರು ಈ ಕುರಿತು ಯಾವುದೇ ಪ್ರತಿಕ್ರಿಯೇಯನ್ನು ನೀಡಿಲ್ಲ. ರಾಜಕಾರಣಿಗಳ ಜಾಣಕುರುಡುನಿಂದ ದೇಶದ ವಿವಿಧ ರಾಜ್ಯಗಳಲ್ಲಿ ಕೆಲಸ ಮಾಡುವ ಯೋಧರಿಗೆ ತಮ್ಮ ಸರ್ವಿಸ್ನ ಕೊನೆಯ ದಿನಗಳನ್ನು ಕರ್ನಾಟದಲ್ಲಿ ಸೇವೆ ಸಲ್ಲಿಸಬೇಕು ಅನ್ನೋ ಆಸೆಗೆ ತಣ್ಣೀರು ಎರಚಿದ್ದಂತಾಗಿದೆ.