ಕೋಲಾರ: ಎರಡು ದಿನದ ಹಿಂದೆ ಜಿಲ್ಲೆಯ ಮಾಲೂರು ತಾಲೂಕು ತೊತಹಳ್ಳಿ ಗ್ರಾಮದ ಕೊಳವೆ ಬಾವಿಯೊಂದರಲ್ಲಿ ನೀರು ಪರೀಕ್ಷೆ ವೇಳೆ 900 ಅಡಿ ಆಳದಲ್ಲಿ ದೇವರ ಕಿರೀಟವೊಂದು ಪತ್ತೆಯಾಗಿತ್ತು. ಆದರೆ ಅದರಿಂದ ಜನರಿಗೆ ಈಗ ನಿರಾಸೆಯಾಗಿದೆ.
ತೊತಹಳ್ಳಿ ಗ್ರಾಮದ ಚಿಕ್ಕವೆಂಕಟರಮಣಪ್ಪ ಎಂಬವರ ಕೊಳವೆ ಬಾವಿಯಲ್ಲಿ ಪುರಾತನ ಕಿರೀಟ ಪತ್ತೆಯಾಗಿತ್ತು. ಒಂದು ವರ್ಷದಿಂದ ಕೆಟ್ಟು ಹೋಗಿದ್ದ ಕೊಳವೆ ಬಾವಿಯಲ್ಲಿ ನೀರಿಗಾಗಿ ಸ್ಕ್ಯಾನಿಂಗ್ ಮಷೀನ್ ಅಳವಡಿಸಿ ಪರೀಕ್ಷೆ ಮಾಡುವ ವೇಳೆ ಕಿರೀಟ ಪತ್ತೆಯಾಗಿದೆ. ಸ್ಕ್ಯಾನರ್ ನಲ್ಲಿ ದೇವರ ಕಿರೀಟ ಕಂಡ ಸ್ಥಳೀಯರು ಆಶ್ಚರ್ಯ ಚಕಿತರಾಗಿದ್ದು, ಪುರಾತನ ಚಿನ್ನದ ಕಿರೀಟ ಪತ್ತೆಯಾಗಿದೆ ಎಂದು ಸಾಕಷ್ಟು ಕುತೂಹಲ ಮೂಡಿಸಿತ್ತು.
ಚಿಕ್ಕವೆಂಕಟರಮಣಪ್ಪ ಎರಡು ವರ್ಷದ ಹಿಂದೆ ಕೊಳವೆ ಬಾವಿಯನ್ನ 900 ಅಡಿ ಕೊರೆಸಿದ್ದರು. ಒಂದು ವರ್ಷದಿಂದ ನೀರಿಲ್ಲದ ಕಾರಣ ಕೊಳವೆ ಬಾವಿ ಬಂದ್ ಮಾಡಲಾಗಿತ್ತು. ಇತ್ತೀಚೆಗೆ ಜೋರು ಮಳೆ ಬಂದ ಹಿನ್ನೆಲೆ ರೀ ಬೋರ್ ಮಾಡಲು ರೈತ ಚಿಕ್ಕವೆಂಕರಮಣಪ್ಪ ಸ್ಕ್ಯಾನ್ ಮಾಡಲು ಮುಂದಾದಾಗ ಕಿರೀಟ ಕಾಣಿಸಿಕೊಂಡಿತ್ತು. ಕಿರೀಟ ನೋಡಿದವರಂತೂ ದೊಡ್ಡ ವಿಗ್ರಹ, ಅದರ ಮತ್ತಷ್ಟು ಭಾಗಗಳು ಒಳಗಡೆ ಮಣ್ಣಿನಲ್ಲಿ ಸೇರಿದೆ ಎಂದು ಮಾತಾಡಿಕೊಳ್ಳುತ್ತಿದ್ದರು. ಪೊಲೀಸರು ಬೋರ್ ವೆಲ್ ಬಳಿ ಬಂದೋಬಸ್ತ್ ಹಾಕಬೇಕಾಗುತ್ತೆ. ಮೇಲಕ್ಕೆ ಎತ್ತೋದು ಹೇಗೆ ಅನ್ನೋ ಲೆಕ್ಕಾಚಾರದಲ್ಲಿ ಇದ್ದರು.
ಆದರೆ ಪತ್ತೆಯಾಗಿರುವ ಕಿರೀಟ ಚಿನ್ನದ್ದೋ ಅಥವಾ ನಕಲಿಯೋ ಎಂದು ತಿಳಿದು ಬಂದಿರಲಿಲ್ಲ. ಈ ಸಂದರ್ಭದಲ್ಲಿ ಸ್ಕ್ಯಾನಿಂಗ್ ಮಾಡುತ್ತಿದ್ದ ವೆಂಕಟೇಶ್ ಮೆಷೀನನ್ನು ಸ್ವಲ್ಪ ಒಳಗೆ ಬಿಟ್ಟು ಮೇಲೆತ್ತುತ್ತಿದ್ದಂತೆ ಅಲ್ಲಿದ್ದ ಕಿರೀಟ ಉಲ್ಟಾ ಹೊಡೆದಿದೆ. ಆಗ ಅದು ಸುವರ್ಣ ಲೇಪಿತ ಪಿಓಪಿಯ ಅಥವಾ ಫೈಬರ್ ನ ಕಿರೀಟ ಎಂದು ತಿಳಿದು ಬಂದಿದೆ.
ಇದರಿಂದ ಅಲ್ಲಿದ್ದ ಜನರಿಗೆ ನಿರಾಸೆ ಉಂಟಾಗಿದೆ ಎಂದು ಸ್ಥಳೀಯರಾದ ಮಂಜುನಾಥ್ ತಿಳಿಸಿದ್ದಾರೆ.