ಮಂಡ್ಯ: ಜಿಲ್ಲೆಯ ಶನೇಶ್ವರ ಸ್ವಾಮಿ ದೇವಸ್ಥಾನದ ಗರ್ಭಗುಡಿಗೆ ಕಾಗೆ ಪ್ರವೇಶ ಮಾಡಿದ್ದು, ಈ ಮೂಲಕ ದೇವಾಲಯದಲ್ಲೊಂದು ಅಚ್ಚರಿ ಸಂಗತಿ ನಡೆದಿದೆ.
ಜಿಲ್ಲೆ ಮದ್ದೂರು ತಾಲೂಕಿನ ಚಾಮನಹಳ್ಳಿ ಗ್ರಾಮದಲ್ಲಿರುವ ಶನೇಶ್ವರ ಸ್ವಾಮಿ ದೇವಾಲಯದಲ್ಲಿ ಶನಿವಾರ ಈ ಘಟನೆ ನಡೆದಿದೆ. ಶನೇಶ್ವರನ ವಾಹನ ಕಾಗೆಯೊಂದು ಗರ್ಭಗುಡಿಯ ಪ್ರವೇಶ ಮಾಡಿ ಶನಿದೇವರ ಪಾದದ ಬಳಿ ಕುಳಿತು ಅಚ್ಚರಿ ಮೂಡಿಸಿದೆ. ಕಾಗೆ ಶನಿ ದೇವರ ಗರ್ಭಗುಡಿಗೆ ಪ್ರವೇಶ ಮಾಡಿದ ಸುದ್ದಿ ತಿಳಿದು ಜನರು ಗರ್ಭಗುಡಿಯಲ್ಲಿದ್ದ ಕಾಗೆಯ ದರ್ಶನ ಮಾಡಿದ್ದಾರೆ.
ಗ್ರಾಮದ ಹಿರಿಯರ ಸಲಹೆ ಮೇರೆಗೆ ಅರ್ಚಕ ಕಾಗೆಗೂ ಪೂಜೆ ಸಲ್ಲಿಸಿ ನೈವೇದ್ಯ ನೀಡಿದ್ದಾರೆ. ಕಾಗೆ ತನಗೆ ಮಂಗಳಾರತಿ ಮಾಡುತ್ತಿದ್ದರೂ ಸ್ವಲ್ಪವೂ ಕದಲದೆ ಸುಮ್ಮನೆ ಕುಳಿತಿತ್ತು. ಗರ್ಭಗುಡಿಯ ನಂತರ ದೇವಾಲಯದ ಮುಂಭಾಗದಲ್ಲಿರುವ ಅರಳಿಮರಕ್ಕೆ ಕಾಗೆ ಪ್ರದಕ್ಷಿಣೆ ಹಾಕಿದೆ.
ಬೆಳಗ್ಗೆಯಿಂದ ದೇವಾಲಯದಲ್ಲಿದ್ದು ಪೂಜೆ ನೈವೇದ್ಯ ಸ್ವೀಕರಿಸಿ ಸಂಜೆ ವೇಳೆ ಕಾಗೆ ಹೋಗಿದೆ. ದೇವಾಲಯದಲ್ಲಿ ನಡೆದ ಘಟನೆಗೆ ಗ್ರಾಮದ ಜನರು ಅಚ್ಚರಿಗೊಂಡಿದ್ದಾರೆ. ಜೊತೆಗೆ ಇದೆಲ್ಲಾ ಶನಿದೇವರ ಮಹಾತ್ಮೆ ಎಂದು ಭಕ್ತಿಯಿಂದ ಪೂಜೆ ಸಲ್ಲಿಸಿದ್ದಾರೆ.