ಬೆಂಗಳೂರು: ರಾಜ್ಯಸಭೆ ಚುನಾವಣೆ ರೋಚಕ ಘಟ್ಟಕ್ಕೆ ತಲುಪಿದೆ. ಇದೇ ತಿಂಗಳ ಜೂನ್ 10ರಂದು ರಾಜ್ಯಸಭಾ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಅಡ್ಡ ಮತದಾನದ ಭೀತಿ ಎದುರಾಗಿದ್ದು, ಜೆಡಿಎಸ್ ಶಾಸಕರನ್ನು ರೆಸಾರ್ಟ್ಗೆ ಶಿಫ್ಟ್ ಮಾಡಲು ಸಿದ್ಧತೆ ನಡೆದಿದೆ.
ಜೆಡಿಎಸ್ನ ಎಲ್ಲ ಶಾಸಕರನ್ನು ದೇವನಹಳ್ಳಿ ಬಳಿಯಿರುವ ಖಾಸಗಿ ರೆಸಾರ್ಟ್ಗೆ ಶಿಫ್ಟ್ ಮಾಡಲು ವರಿಷ್ಠರು ಚಿಂತನೆ ನಡೆಸಿದ್ದಾರೆ. ಇಂದು ರಾತ್ರಿ ಅಥವಾ ನಾಳೆ ಬೆಳಗ್ಗೆ ವೇಳೆಗೆ ಶಿಫ್ಟ್ ಮಾಡುವ ಸಾಧ್ಯತೆಯಿದೆ. ಈಗಾಗಲೇ ರೆಸಾರ್ಟ್ಗೆ ಬರಲು ಸೂಚನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ರಾಜ್ಯಸಭೆ ಚುನಾವಣೆ: ಕೈ, ದಳದಲ್ಲಿ ಗೊಂದಲ – ಇಬ್ಬರ ಜಗಳದ ಲಾಭ ಪಡೆಯುವ ನಿರೀಕ್ಷೆಯಲ್ಲಿ BJP
ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಸೂಚನೆ ಮೇರೆಗೆ ಇಂದು ಮತ್ತು ನಾಳೆ ಎರಡು ದಿನ ರೆಸಾರ್ಟ್ನಲ್ಲೇ ಉಳಿಯಲಿದ್ದು, ರಾಜ್ಯಸಭೆ ಚುನಾವಣೆ ದಿನದಂದು ನೇರವಾಗಿ ಮತದಾನಕ್ಕೆ ಹಾಜರಾಗಲು ನಿರ್ಧಾರಿಸಲಾಗಿದೆ.
ರಾಜ್ಯಸಭೆ ಚುನಾವಣೆಯಲ್ಲಿ 4ನೇ ಅಭ್ಯರ್ಥಿಯ ಗೆಲುವಿಗೆ ಮೂರು ಪಕ್ಷಗಳೂ ಕಸರತ್ತು ನಡೆಸುತ್ತಿವೆ. ಬಿಜೆಪಿ ಸಹ ಜೆಡಿಎಸ್, ಕಾಂಗ್ರೆಸ್ ಪಕ್ಷದ ಶಾಸಕರನ್ನು ಸೆಳೆಯಲು ಪ್ರಯತ್ನ ನಡೆಸಿದೆ. ಇದನ್ನೂ ಓದಿ: ನಮ್ಮ ಜೊತೆ ಹೊಂದಾಣಿಕೆ ಮಾಡಿಕೊಳ್ಳೋದಾದ್ರೆ ನಿಮ್ಮ ಅಭ್ಯರ್ಥಿಯನ್ನ ಕಣದಿಂದ ಹಿಂದೆ ಸರಿಸಿ: JDSಗೆ ಸಿದ್ದು ಸವಾಲ್
ಜೆಡಿಎಸ್ ಪಾಳಯದಲ್ಲೂ ಆತಂಕ ಮುಂದುವರಿದಿದ್ದು, ಶತಾಯಗತಾಯ ಕಾಂಗ್ರೆಸ್ ಬೆಂಬಲ ಪಡೆದು ತನ್ನ ಅಭ್ಯರ್ಥಿ ಗೆಲ್ಲಿಸಿಕೊಳ್ಳಲೇಬೇಕೆಂದು ಕಸರತ್ತು ನಡೆಸಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ವರಿಷ್ಠರ ಮನವೊಲಿಸುವ ಪ್ರಯತ್ನಗಳೂ ನಡೆದಿತ್ತು. ಇದೀಗ ಜೆಡಿಎಸ್ಗೆ ಅಡ್ಡ ಮತದಾನದ ಭೀತಿ ಶುರುವಾಗಿದ್ದು, ಶಾಸಕರನ್ನು ರೆಸಾರ್ಟ್ಗೆ ಶಿಫ್ಟ್ ಮಾಡಲು ವರಿಷ್ಠರು ಮುಂದಾಗಿದ್ದಾರೆ.