– ಯುವಕರ ಕೆಲಸಕ್ಕೆ ಎಡಿಜಿಪಿ ಮೆಚ್ಚುಗೆ
ಜೈಪುರ್: ಅತ್ಯಾಚಾರಕ್ಕೆ ಒಳಗಾಗುತ್ತಿದ್ದ ಅಪ್ರಾಪ್ತೆಯನ್ನು ಕ್ರಿಕೆಟ್ ಆಡುತ್ತಿದ್ದ ಯುವಕರು ರಕ್ಷಿಸಿದ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.
ಗುರುವಾರ ಯುವಕರು ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದರು. ಈ ವೇಳೆ ಬಾಲಕಿ ಕಿರುಚಿಕೊಳ್ಳುತ್ತಿದ್ದಳು. ಬಾಲಕಿಯ ಕಿರುಚಾಟದ ಸದ್ದು ಕೇಳಿ ಯುವಕರು ಅಲ್ಲಿಗೆ ಓಡಿ ಹೋಗಿದ್ದಾರೆ. ಆಗ ಆರೋಪಿ ಅಪ್ರಾಪ್ತ ಬಾಲಕಿ ಮೇಲೆ ಯತ್ನಿಸುತ್ತಿದ್ದನು. ಬಳಿಕ ಯುವಕರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಅಪ್ರಾಪ್ತ ಬಾಲಕಿಯನ್ನು ರಕ್ಷಿಸಿ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಕ್ಕೆ ಎಡಿಜಿಪಿ ಬಿ.ಕೆ ಸೋನಿ ಯುವಕರಿಗೆ ಸರ್ಟಿಫಿಕೇಟ್ ಹಾಗೂ ನಗದನ್ನು ಬಹುಮಾನವಾಗಿ ನೀಡಿದ್ದಾರೆ. ಜವಹಾರ್ ನಗರ ಕಚ್ಚಿ ಬಸ್ತಿಯ ನಿವಾಸಿಯಾಗಿರುವ ಮನೀಶ್(15), ಅಮೀತ್(18), ರೋಹಿತ್ (18) ಹಾಗೂ ಬಾದಲ್ (14) ಈ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿದ ಎಡಿಜಿಪಿ ಬಿ.ಕೆ ಸೋನಿ ಯುವಕರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಯುವಕರ ಈ ಕೆಲಸವನ್ನು ಎಲ್ಲರೂ ಮಾಡಬೇಕು. ದೇಶದ ಪ್ರಜೆಯಾಗಿ ಯುವಕರು ತಮ್ಮ ಕೆಲಸವನ್ನು ಮಾಡಿದ್ದಾರೆ. ಆ ಯುವಕರ ಭವಿಷ್ಯಕ್ಕೆ ನಾನು ಶುಭ ಕೋರುತ್ತೇನೆ” ಎಂದು ತಿಳಿಸಿದ್ದಾರೆ.