ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ದೀರ್ಘ ಎರಡು ತಿಂಗಳ ರಜೆ ಪಡೆದುಕೊಂಡಿದ್ದಾರೆ. ರಜೆ ಹಿನ್ನೆಲೆಯಲ್ಲಿ ವೆಸ್ಟ್ ಇಂಡೀಸ್ ಜೊತೆಗಿನ ಸರಣಿ ಪಂದ್ಯಗಳಲ್ಲಿ ಧೋನಿ ಅಲಭ್ಯರಾಗಲಿದ್ದಾರೆ.
ಧೋನಿ ಟೆರಿಟೋರಿಯಲ್ ಆರ್ಮಿಯ ಪ್ಯಾರಾಶೂಟ್ ರೆಜಿಮೆಂಟ್ ನ ಕರ್ನಲ್ ಆಗಿದ್ದಾರೆ. ಹಾಗಾಗಿ ತಮ್ಮ ಎರಡು ತಿಂಗಳ ರಜೆಯನ್ನು ರೆಜಿಮೆಂಟ್ ನಲ್ಲಿ ಕಳೆಯಲಿದ್ದಾರೆ ಎಂದು ವರದಿಯಾಗಿದೆ. ಧೋನಿ ಅವರೇ ಸ್ವಇಚ್ಛೆಯಿಂದ ವೆಸ್ಟ್ ಇಂಡೀಸ್ ಜೊತೆಗಿನ ಪಂದ್ಯಕ್ಕೆ ಅಲಭ್ಯರಾಗುತ್ತಿದ್ದಾರೆ. ತಮ್ಮ ಎರಡು ತಿಂಗಳ ರಜಾವಧಿಯನ್ನು ಪ್ಯಾರಾಮಿಲಿಟ್ರಿ ರೆಜಿಮೆಂಟ್ ಜೊತೆ ವ್ಯಯಿಸಲಿದ್ದಾರೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಧೋನಿ ಈಗಾಗಲೇ ತಮ್ಮ ನಿರ್ಧಾರವನ್ನು ಬಿಸಿಸಿಐ ಮುಂದೆ ತಿಳಿಸಿದ್ದಾರೆ. ಭಾನುವಾರ ಎಸ್ಎಂಕೆ ಪ್ರಸಾದ್ ಅಧ್ಯಕ್ಷತೆಯ ಸಮಿತಿ ವೆಸ್ಟ್ ಇಂಡೀಸ್ ವಿರುದ್ಧ ಆಡಲಿರುವ ಟೀಂ ಇಂಡಿಯಾ ಆಟಗಾರರನ್ನು ಆಯ್ಕೆ ಮಾಡಲಿದೆ. ಧೋನಿ ಅಲಭ್ಯ ಹಿನ್ನೆಲೆಯಲ್ಲಿ ಮೂರು ಫಾರ್ಮೆಟ್ ಗಳಲ್ಲಿ ರಿಷಬ್ ಪಂತ್ ವಿಕೇಟ್ ಕೀಪರ್ ಆಗಿ ಆಡುವ ಸಾಧ್ಯತೆಗಳಿವೆ. ರಿಷಬ್ ಪಂತ್ ಮೊದಲ ಆಯ್ಕೆಯಾಗಿದ್ದು, ವೃದ್ಧಿಮಾನ್ ಸಹಾ ಬಿಸಿಸಿಐ ಎರಡನೇ ಆಯ್ಕೆಯಾಗಲಿದ್ದಾರೆ.