ಬೆಂಗಳೂರು: ಒಂದು ವಾರದ ಹಿಂದೆಯಷ್ಟೇ ಮತ್ತೆ ಆರಂಭಗೊಂಡಿದ್ದ ನಗರದ ಮಲ್ಲೇಶ್ವರದಲ್ಲಿರುವ ಮಂತ್ರಿ ಮಾಲ್ ಛಾವಣಿಯಲ್ಲಿ ಬಿರುಕು ಮೂಡಿದೆ.
ಮಂತ್ರಿಮಾಲ್ ಎರಡನೇ ಮಹಡಿಯ ಛಾವಣಿಯಲ್ಲಿ ಬಿರುಕು ಮೂಡಿದ್ದು, ಈ ಬಿರುಕಿನಲ್ಲಿ ನೀರು ಸೋರಿಕೆಯಾಗುತ್ತಿದೆ. ನಿನ್ನೆ ಸುರಿದ ಮಳೆಗೆ ಮಂತ್ರಿಮಾಲ್ ಛಾವಣಿಯಿಂದ ನೀರು ಸೋರಿಕೆಯಾಗಿದೆ. ಎಸಿ ಪೈಪ್ ಮೂಲಕ ನೀರು ಬರುತ್ತಿರುವ ಗುಮಾನಿ ಇದ್ದು ಮತ್ತೆ ಮಂತ್ರಿಮಾಲ್ ನಲ್ಲಿ ಅಭದ್ರತೆ ಕಾಡಿದೆ.
ಜನವರಿ 16ರಂದು ಮಂತ್ರಿ ಸ್ಕ್ವೇರ್ ಹಿಂಭಾಗದ ಗೋಡೆ (ಪ್ಯಾರಾಪೆಟ್ ವಾಲ್) ಕುಸಿದು ಬಿದ್ದು ಮೂವರು ಮಹಿಳೆಯರು ಗಾಯಗೊಂಡಿದ್ದರು. ಈ ಪ್ರಕರಣದ ಬಳಿಕ ಮಂತ್ರಿ ಸ್ಕ್ವೇರ್ ವಾಸಯೋಗ್ಯ ಪ್ರಮಾಣಪತ್ರವನ್ನು ಬಿಬಿಎಂಪಿ ಕೂಡಲೇ ವಾಪಸ್ ಪಡೆದಿತ್ತು. ಕಟ್ಟಡದ ಸುರಕ್ಷತೆ ಪರಿಶೀಲನೆಗಾಗಿ ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ ಪ್ರಸಾದ್ ಅವರ ನೇತೃತ್ವದಲ್ಲಿ ಆರು ಜನ ಸದಸ್ಯರ ಸಮಿತಿಯನ್ನು ರಚಿಸಲಾಗಿತ್ತು. ಸಮಿತಿ ಮೇಯರ್ ಜಿ.ಪದ್ಮಾವತಿ ಅವರಿಗೆ ಸಲ್ಲಿಸಿದ ವರದಿ ಆಧಾರದಲ್ಲಿ 12 ಷರತ್ತುಗಳನ್ನು ವಿಧಿಸಿ ಫೆ.26 ರಿಂದ ಮಂತ್ರಿ ಮಾಲ್ ಪುನಾರಂಭಕ್ಕೆ ಬಿಬಿಎಂಪಿ ಅನುಮತಿ ನೀಡಿತ್ತು.