ಬೆಳಗಾವಿ: ಈ ಭೂಮಂಡಲದಲ್ಲಿ ದೇವರು ಇದ್ದಾನೆಂದು ಮನುಷ್ಯ ಹೇಗೆ ನಂಬಿದ್ದಾನೋ ಅದರಂತೆ ವಿಸ್ಮಯಗಳು ಕೂಡ ನಡೆಯುತ್ತಿರುವುದು ಸತ್ಯ. ಗೋಕಾಕ್ ಪಟ್ಟಣದ ಯೋಗಿಕೊಳ್ಳದಲ್ಲಿರುವ ಏಡಿ ಸಹ ಪೂಜೆ ಸಮಯಕ್ಕೆ ಬಂದು ಪ್ರಸಾದ ತಿಂದು ಕ್ಷಣಾರ್ಧದಲ್ಲಿ ಮಾಯವಾಗುತ್ತದೆ.
ಗೋಕಾಕ್ ಪಟ್ಟಣದ ಯೋಗಿಕೊಳ್ಳದಲ್ಲಿರುವ ನೂರಾರು ಅಡಿ ಎತ್ತರದ ಬಂಡೆಯ ಗೂಹೆಯೊಂದರಲ್ಲಿ ಗಂಗಾಮಾತೆ ನೆಲೆಸಿದ್ದಾಳೆ. ಗಂಗಾಮಾತೆಗೆ ಪ್ರತಿದಿನ ಪೂಜೆ ನಡೆಯುತ್ತದೆ. ಈ ಪೂಜಾ ಸಮಯದಲ್ಲಿ ವಿಶೇಷ ಅತಿಥಿಯಾಗಿ ಏಡಿ ಪ್ರತ್ಯಕ್ಷವಾಗುತ್ತೆ. ಪೂಜೆಯ ಪ್ರಸಾದ ತಿಂದು ನಂತರ ಕ್ಷಣಾರ್ಧದಲ್ಲಿ ಮಾಯವಾಗುತ್ತದೆ. ಗಂಗಾಮಾತೆಯ ಪೂಜಾ ವೇಳೆ ಏಡಿಯ ಈ ನಡೆಯನ್ನು ನೋಡಿ ಅರ್ಚಕರೇ ಬೆರಗಾಗಿದ್ದಾರೆ.
ಪ್ರತಿದಿನ ಬೆಳಗ್ಗೆ ಮತ್ತು ಸಾಯಂಕಾಲ ಗಂಗಾಮಾತೆಗೆ ಪೂಜೆ ಸಲ್ಲಿಸುಲಾಗುತ್ತದೆ. ಪೂಜೆ ಸಮಯಕ್ಕೆ ಸರಿಯಾಗಿ ಕಾಣಿಸಿಕೊಳ್ಳುವ ಏಡಿ, ಪ್ರಸಾದ ಸೇವಿಸಿದ ಬಳಿಕ ಹೋಗುತ್ತದೆ. ಆದ್ರೆ ಅದು ಎಲ್ಲಿ ಹೋಗುತ್ತೆ ಎಂಬುದರ ಬಗ್ಗೆ ಗೊತ್ತಿಲ್ಲ. ಪೂಜೆ ಬಳಿಕ ಏಡಿ ಯಾರಿಗೂ ಕಾಣಲ್ಲ ಎಂದು ಯೋಗಿಕೊಳ್ಳಮಠ ಅರ್ಚಕ ಮಲ್ಲಯ್ಯ ಪೂಜಾರಿ ಹೇಳುತ್ತಾರೆ.
ಈ ಗುಹೆಯೊಳಗೆ ಐನೂರು ವರ್ಷಗಳ ಹಳೆಯದಾದ ಮಲ್ಲಯ್ಯ ದೇವರ ಉದ್ಭವ ಮೂರ್ತಿ ಇದೆ. ಆದರೆ ಗಂಗಾದೇವತೆಯ ಪೂಜಾ ಸಮಯದ ವೇಳೆ ದಿನನಿತ್ಯ ಏಡಿ ಬರುವುದು ವಿಶೇಷವಾಗಿದೆ. ಸಹಜವಾಗಿ ಬೆಂಕಿ ಎಂದಾಕ್ಷಣ ಪ್ರಾಣಿ ಪಕ್ಷಿಗಳು ಭಯಪಡುವುದು ಸಹಜ. ಆದರೆ ಕರ್ಪೂರ ಹಚ್ಚಿ ದೀಪ ಬೆಳಗುತ್ತಿದ್ದಂತೆ ಏಡಿ ಬಂದು ದರ್ಶನ ಪಡೆಯುವುದು ವಿಸ್ಮಯಕಾರಿ. ಈ ವಿಸ್ಮಯ ನೋಡಲು ಭಕ್ತರು ಬೆಳ್ಳಂಬೆಳಗ್ಗೆ ಜಮಾಯಿಸಿರುತ್ತಾರೆ. ಒಟ್ಟಾರೆಯಾಗಿ ಗಂಗಾಮಾತೆಯ ಪೂಜೆಯ ವೇಳೆ ಈ ವಿಸ್ಮಯ ನೋಡಿ ಪವಾಡವೇ ಎಂದು ಜನರು ನಂಬಿದ್ದಾರೆ.