ಬೆಂಗಳೂರು: ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಗೆ ಸಚಿವ ಸ್ಥಾನ ಕೊಡುವುದಕ್ಕೆ ನನ್ನ ವಿರೋಧ ಇಲ್ಲವೇ ಇಲ್ಲ ಎಂದು ರಾಮನಗರ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎಂ.ರುದ್ರೇಶ್ ಸ್ಪಷ್ಟಪಡಿಸಿದರು.
ಬೆಂಗಳೂರಿನಲ್ಲಿ ಮಾತಾಡಿದ ರುದ್ರೇಶ್, ಯೋಗೇಶ್ವರ್ ಅವರು ನಮ್ಮ ಜಿಲ್ಲೆಯವರು. ನಾನೂ ರಾಮನಗರ ಜಿಲ್ಲೆಯವನಾಗಿ ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ಕೊಡಲು ಖಂಡಿತ ವಿರೋಧಿಸಿಲ್ಲ.ನಮ್ಮ ಜಿಲ್ಲೆಯವರಾದ ಯೋಗೇಶ್ವರ್ ರಿಗೆ ಸಚಿವ ಸ್ಥಾನ ಸಿಕ್ಕಿದರೆ ಅದು ನಮಗೆಲ್ಲ ಸಂತೋಷವೇ. ಅದರಿಂದ ನಮ್ಮ ಜಿಲ್ಲೆಯೂ ಅಭಿವೃದ್ಧಿ ಆಗಲಿದೆ. ನಮ್ಮ ಜಿಲ್ಲೆಗೆ ಸಚಿವ ಸ್ಥಾನ ಕೊಟ್ರೆ ಯಾರು ಬೇಡ ಅಂತಾರೆ ಎಂದು ಹೇಳಿದರು.
ಸೋಮವಾರ ಕಲ್ಯಾಣ ಕರ್ನಾಟಕ ಭಾಗದ ಬಿಜೆಪಿ ಶಾಸಕರ ಭಿನ್ನಮತೀಯ ಸಭೆಗೆ ಹೋಗಿದ್ದರ ಬಗ್ಗೆಯೂ ರುದ್ರೇಶ್ ಕಾರಣ ನೀಡಿದರು. ನಿನ್ನೆ ಕಲ್ಯಾಣ ಕರ್ನಾಟಕದ ನನ್ನ ಶಾಸಕ ಮಿತ್ರರು ಸಭೆ ನಡೆಸ್ತಿದ್ದಾರೆ ಅಂತ ಗೊತ್ತಾಗಿ ಅಲ್ಲಿಗೆ ಹೋಗಿದ್ದೆ. ಆ ಶಾಸಕ ಮಿತ್ರರಲ್ಲೂ ಯೋಗೇಶ್ವರ್ ರಿಗೆ ವಿರೋಧಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದೇನೆ. ಸೋತವರಿಗೆ ಮಂತ್ರಿ ಸ್ಥಾನ ಕೊಡೋದು ಗೆದ್ದಿರುವ ಅವರಿಗೆಲ್ಲ ಸಹಜವಾಗಿ ಬೇಸರವಾಗಿರಬಹುದು. ಆದರೆ ಹೈಕಮಾಂಡ್ ಯೋಗೇಶ್ವರ್ ಅವರಿಗೆ ಮಂತ್ರಿ ಸ್ಥಾನ ಕೊಟ್ಟರೆ ಅವರೂ ಒಪ್ಪಬಹುದು. ಆದರೆ ನಾನು ಆ ಶಾಸಕರ ಸಭೆಗೆ ಹೋಗಿದ್ದು ವಿರೋಧ ಬೇಡ ಎಂದು ಮನವಿ ಮಾಡಲು ಮಾತ್ರ ಎಂದು ಎಂ.ರುದ್ರೇಶ್ ಸ್ಪಷ್ಟೀಕರಣ ನೀಡಿದರು.