ರಾಮನಗರ: ಕೇರಳದ ಕಸಾಯಿಖಾನೆಗೆ ಸಾಗಿಸುತ್ತಿದ್ದ 20ಕ್ಕೂ ಹೆಚ್ಚು ಗೋವುಗಳನ್ನು ಸಾರ್ವಜನಿಕರೇ ರಕ್ಷಣೆ ಮಾಡಿರುವ ಘಟನೆ ಚನ್ನಪಟ್ಟಣದ ಸುಣ್ಣಘಟ್ಟ ಬಳಿ ನಡೆದಿದೆ.
ಇಂದು ಚನ್ನಪಟ್ಟಣದ ಸಾತನೂರು-ಹಲಗೂರು ರಸ್ತೆಯಲ್ಲಿ ಟೆಂಪೋದಲ್ಲಿ ಸಾಗಿಸುತ್ತಿದ್ದ ವೇಳೆ ಸಾರ್ವಜನಿಕರು ವಾಹನವನ್ನು ತಡೆದು ನಿಲ್ಲಿಸಿದ್ದಾರೆ. ಬಳಿಕ ಟೆಂಪೋವನ್ನು ಪರಿಶೀಲನೆ ನಡೆಸಲಾಗಿದ್ದು, 20ಕ್ಕೂ ಹೆಚ್ಚು ಗೋವುಗಳನ್ನು ಹಗ್ಗಗಳಿಂದ ಕಟ್ಟಿ, ಚೀಲದಲ್ಲಿ ಕಟ್ಟಿ ಹಾಕಿದ್ದು ಕಂಡುಬಂದಿದೆ.
ಕೂಡಲೇ ಟೆಂಪೋದಲ್ಲಿದ್ದವರನ್ನು ಸಾರ್ವಜನಿಕರು ಪ್ರಶ್ನಿಸಿದ್ದು, ಯಾವುದಕ್ಕೂ ಉತ್ತರಿಸಿಲ್ಲ. ಸ್ಥಳಕ್ಕೆ ಭೇಟಿ ನೀಡಿದ ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ಗೋವುಗಳನ್ನು ಕೇರಳಕ್ಕೆ ಕಸಾಯಿಖಾನೆಗೆ ಸಾಗಾಟ ಮಾಡುತ್ತಿದ್ದ ಅಲೀಮ್ ಹಾಗೂ ಅಬ್ಬಾಸ್ ಎಂಬವರನ್ನು ಬಂಧಿಸಿದ್ದಾರೆ. ಟೆಂಪೋ ಚಾಲಕ ಅಯಾಜ್ ಎಂಬಾತ ಪರಾರಿಯಾಗಿದ್ದಾನೆ. ಘಟನೆ ಸಂಬಂಧ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ರಕ್ಷಿಸಿದ ಗೋವುಗಳನ್ನು ರಾಮನಗರದಲ್ಲಿನ ಗೋವು ಸಂರಕ್ಷಣಾ ಕೇಂದ್ರಕ್ಕೆ ರವಾನಿಸಲಾಗಿದೆ.