ಬೆಂಗಳೂರು: ಎಲ್ಲ ಸಂದರ್ಭದಲ್ಲೂ ನಮ್ಮ ಸರ್ಕಾರ ರಾಜ್ಯದ ಜನರ ಜೊತೆಗಿರುತ್ತದೆ. ಕುಟುಂಬದವರನ್ನು ಕಳೆದುಕೊಂಡು ದಿಕ್ಕಿಲ್ಲದೇ ಇರುವವರಿಗೆ ಅನುಕೂಲ ಆಗಲಿ. ಅವರು ಎಲ್ಲರಂತೆ ಬದುಕಬೇಕು ಎನ್ನುವುದು ನಮ್ಮ ಸರ್ಕಾರದ ಆಶಯ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ, ಕೋವಿಡ್ನಿಂದ ಮೃತಪಟ್ಟವರಿಗೆ ಕಂದಾಯ ಇಲಾಖೆಯ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಬಿಪಿಎಲ್ ಕುಟುಂಬದವರಿಗೆ 1 ಲಕ್ಷ ರೂಪಾಯಿಗಳ ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇದನ್ನೂ ಓದಿ: ಬನ್ನಿ.. ಬನ್ನಿ.. ಯಾರು ಗೆದ್ದರೂ ನಮ್ಮವ್ರೇ – ಕಾಂಗ್ರೆಸ್, ಪಕ್ಷೇತರ ಅಭ್ಯರ್ಥಿಗಳ ಜೊತೆ ಸಿ.ಟಿ ರವಿ ಫೋಟೋ
ಕೋವಿಡ್ನಿಂದ ಎಷ್ಟೋ ಕುಟುಂಬಗಳಲ್ಲಿ ದುಡಿದು ಮನೆ ನಡೆಸುವವರೇ ಸತ್ತಿದ್ದಾರೆ. ಹಲವಾರು ಕುಟುಂಬಕ್ಕೆ ದಿಕ್ಕೇ ಇಲ್ಲದಂತಾಗಿದೆ. ಅಂತವರಿಗೆ ನೆರವಿಗೆ ಸರ್ಕಾರ ಇರಬೇಕು ಎನ್ನುವ ಕಾರಣಕ್ಕೆ ಈ ಯೋಜನೆ ಜಾರಿಗೆ ತಂದಿದ್ದೇವೆ. ಬಿಪಿಎಲ್ ಕುಟುಂಬದ ಸದಸ್ಯರು ಕೋವಿಡ್ನಿಂದ ಮೃತಪಟ್ಟರೆ ರಾಜ್ಯ ಸರ್ಕಾರ 1 ಲಕ್ಷ ರೂ. ಮತ್ತು ಕೋವಿಡ್ ನಿಂದ ಮೃತಪಟ್ಟ ಎಲ್ಲರಿಗೂ ಕೇಂದ್ರ ಸರ್ಕಾರ 50 ಸಾವಿರ ಹಣ ನೀಡುತ್ತದೆ. ಕುಟುಂಬದವರನ್ನು ಕಳೆದುಕೊಂಡು ದಿಕ್ಕಿಲ್ಲದೇ ಇರುವವರಿಗೆ ಅನುಕೂಲ ಆಗಲಿ. ಅವರು ಎಲ್ಲರಂತೆ ಬದುಕಬೇಕು ಎನ್ನುವುದು ನಮ್ಮ ಸರ್ಕಾರದ ಆಶಯ. ರಾಜ್ಯ ಸರ್ಕಾರ ಕೋವಿಡ್ ಪರಿಹಾರ ವಿತರಣೆಗೆ 400 ಕೋಟಿ ಹಣ ಮೀಸಲಿರಿಸಿದೆ. 11,982 ಬಿಪಿಎಲ್ ಕುಟುಂಬಗಳಿಗೆ ಚೆಕ್ ವಿತರಿಸುವ ಕಾರ್ಯ ನಡೆಯುತ್ತಿದೆ. ಕೇಂದ್ರ ಸರ್ಕಾರದ ಪರಿಹಾರ ಯೊಜನೆಯಡಿ 22,879 ಕುಟುಂಬಗಳಿಗೆ ನೇರವಾಗಿ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಲಾಗಿದೆ. ಬೆಂಗಳೂರಿನಲ್ಲಿ 2,601 ಕುಟುಂಬಗಳಿಗೆ ಈವರೆಗೆ 1 ಲಕ್ಷ ರೂ. ನೀಡಿದ್ದೇವೆ. ಕೇಂದ್ರದ ಪರಿಹಾರ ಅಡಿಯಲ್ಲಿ 7,262 ಕುಟುಂಬಕ್ಕೆ 50 ಸಾವಿರ ರೂಪಾಯಿಗಳನ್ನು ನೇರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗಿದೆ ಎಂದರು.
ಸಿಂಪಲ್ ಸಿಎಂ ಬೊಮ್ಮಾಯಿ!: ಜನಪ್ರಿಯ ಮುಖ್ಯಮಂತ್ರಿ ಬೊಮ್ಮಾಯಿಯವರ ನೇತೃತ್ವದ ರಾಜ್ಯ ಸರ್ಕಾರ ಹಲವಾರು ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ. ತಮ್ಮ ಸರಳತನದಿಂದಲೇ ಜನರಿಗೆ ಅಚ್ಚುಮೆಚ್ಚಿನ ಮುಖ್ಯಮಂತ್ರಿಯಾಗಿದ್ದಾರೆ. ಸರ್ಕಾರವೇ ಜನರ ಮನೆ ಬಾಗಿಲಿಗೆ ಹೋಗಬೇಕು ಎನ್ನುವುದು ಅವರ ಆಶಯ. ಸರ್ಕಾರದ ಎಲ್ಲ ಯೋಜನೆಗಳು ಜನರಿಗೆ ಸರಿಯಾಗಿ ತಲುಪಬೇಕು. ರಾಜ್ಯದ ಜನತೆ ನೆಮ್ಮದಿಯ ಜೀವನ ನಡೆಸುವಂತಾಗಬೇಕು ಎಂದು ಹಂಬಲಿಸುವ ಸಿಂಪಲ್ ಮುಖ್ಯಮಂತ್ರಿ ಎನ್ನುವುದು ನಮ್ಮ ಹೆಮ್ಮೆ ಎಂದು ಹೇಳಿದರು. ಇದನ್ನೂ ಓದಿ: 15 ರಿಂದ 18 ವರ್ಷದವರು ಜ. 1ರಿಂದ ಕೋವಿನ್ನಲ್ಲಿ ಲಸಿಕೆಗೆ ಹೆಸರು ನೋಂದಾಯಿಸಬಹುದು
ಇತ್ತೀಚೆಗೆ ಸುರಿದ ಮಳೆಯಿಂದ ರಾಜ್ಯಾದ್ಯಂತ ಬೆಳೆ ಹಾನಿ, ಮನೆ ಹಾನಿ ಸಂಭವಿಸಿತ್ತು. ಮೊದಲೆಲ್ಲ ಪರಿಹಾರ ಪಡೆಯಲು ರೈತರು 6-9 ತಿಂಗಳು ಕಾಯಬೇಕಿತ್ತು. ಈಗ ಹಾಗಿಲ್ಲ ಒಂದು ತಿಂಗಳು ಒಳಗಾಗಿ 15.4೦ ಲಕ್ಷ ರೈತರಿಗೆ 1003.5 ಕೋಟಿ ರೂ ಗಳನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದೇವೆ. ಮಧ್ಯವರ್ತಿಗಳಿಂದ ರೈತರಿಗೆ ಆಗುತ್ತಿದ್ದ ಸಮಸ್ಯೆಯನ್ನು ನಿವಾರಿಸಿದ್ದೇವೆ. ಇಷ್ಟು ಬೇಗ ಪರಿಹಾರ ನೀಡಿದ ದಾಖಲೆಯೇ ನಮ್ಮಲ್ಲಿ ಇರಲಿಲ್ಲ ಎಂದರು.
ಸಾಮಾಜಿಕ ಭದ್ರತೆ ಅಡಿಯಲ್ಲಿ 69.82 ಲಕ್ಷ ಜನರಿಗೆ ಪಿಂಚಣಿ ನೀಡುತ್ತಿದ್ದೇವೆ. ಪ್ರಸಕ್ತ ವರ್ಷದಲ್ಲಿ 4.01 ಲಕ್ಷ ನೂತನ ಫಲಾನುಭವಿಗಳಿದ್ದಾರೆ. ವರ್ಷಾಂತ್ಯದಲ್ಲಿ 7 ಲಕ್ಷ ಫಲಾನುಭವಿಗಳಿಗೆ ಪಿಂಚಣಿ ಮಂಜೂರು ಮಾಡುವ ಗುರಿ ಇದೆ. ಮನೆಬಾಗಿಲಿಗೆ ಮಾಸಾಶನ ಯೋಜನೆಯಡಿಯಲ್ಲಿ ಸುಮಾರು 30 ಸಾವಿರ ಜನರಿಗೆ ಪಿಂಚಣಿ ಮಂಜೂರಾತಿ ಆಗಿದೆ. ನಮ್ಮದು ಜನರ ಸರ್ಕಾರ, ಜನಪರ ಸರ್ಕಾರ, ಜನಸ್ನೇಹಿ ಸರ್ಕಾರ. ಜನವರಿಯಿಂದ ರಾಜ್ಯದ 45 ಲಕ್ಷ ರೈತರಿಗೆ ಪಹಣಿ, ಖಾತೆ, RTC, ನಕ್ಷೆ ಇವುಗಳನ್ನು ಅಧಿಕಾರಿಗಳು ಮನೆಗೇ ತಲುಪಿಸಲು ಯೋಜನೆ ರೂಪಿಸುತ್ತೇವೆ ಎಂದು ಹೇಳಿದರು.