ಮಡಿಕೇರಿ: ಕೋವಿಡ್ ಮೂರನೇ ಅಲೆಯಲ್ಲಿ ನಷ್ಟ ಕಂಡಿದ್ದ ಕೊಡಗಿನ ಪ್ರವಾಸೋದ್ಯಮ ಈಗ ಚೇತರಿಕೆ ಹಾದಿಗೆ ಮರಳಿದೆ.
ಡಿಸೆಂಬರ್ ತಿಂಗಳಿನಲ್ಲಿ ಒಂದಷ್ಟು ಆಶಾದಾಯಕ ಬೆಳವಣಿಗೆ ಕಂಡಿದ್ದ ಕೊಡಗಿನ ಪ್ರವಾಸೋದ್ಯಮ ನೈಟ್ ಕರ್ಫ್ಯೂ ಮತ್ತು ವಿಕೇಂಡ್ ಕರ್ಫ್ಯೂ ನಿಂದಾಗಿ ಸಂಪೂರ್ಣ ನೆಲಕಚ್ಚಿತ್ತು. ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ ತೆರವು ಮಾಡಿದ 2 ವಾರಗಳ ಕಾಲವೂ ಕೊಡಗಿನತ್ತ ಪ್ರವಾಸಿಗರು ಮುಖ ಮಾಡಲೇ ಇಲ್ಲ. ಇದನ್ನೂ ಓದಿ: 2011ರ ವಿಶ್ವಕಪ್ ಫೈನಲ್ನಲ್ಲಿ ಯುವಿಗಿಂತ ಧೋನಿ ಕೀರ್ತಿ ಹೆಚ್ಚಿದ್ದು ಹೇಗೆ?
3ನೇವಾರದಲ್ಲಾದರೂ ಪ್ರವಾಸಿಗರು ಬರಬಹುದೆಂಬ ನಿರೀಕ್ಷೆಯಲ್ಲಿ ಕೊಡಗಿನ ಪ್ರವಾಸೋದ್ಯಮಿಗಳಿದ್ದರು. ಈ ವಾರವೂ ಪ್ರವಾಸಿಗರು ಭಾರೀ ಸಂಖ್ಯೆಯಲ್ಲೇನು ಬಂದಿಲ್ಲ. ಆದರೆ ಕಳೆದ ಎರಡು ವಾರಗಳಿಗೆ ಹೋಲಿಸಿದರೆ ಒಂದಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಕೊಡಗಿಗೆ ಆಗಮಿಸಿದ್ದು ಪ್ರವಾಸಿತಾಣಗಳು ಒಂದಷ್ಟು ಕಳೆ ಪಡೆದುಕೊಂಡಿವೆ.
ಮಡಿಕೇರಿ ಸಮೀಪದ ಅಬ್ಬಿಜಲಪಾತ, ಕುಶಾಲನಗರ ಸಮೀಪದ ಕಾವೇರಿ ನಿಸರ್ಗಧಾಮ ಸೇರಿದಂತೆ ಹಲವು ಪ್ರವಾಸಿ ತಾಣಗಳಲ್ಲಿ ಒಂದಷ್ಟು ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಆದರೆ ಕಳೆದ ವರ್ಷಗಳಿಗೆ ಹೋಲಿಸಿದರೆ ಡಿಸೆಂಬರ್, ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ಕೊಡಗಿಗೆ ಬರುತ್ತಿದ್ದ ಪ್ರವಾಸಿಗರಷ್ಟು ಪ್ರಮಾಣದಲ್ಲಿ ಈ ಬಾರಿ ಇಲ್ಲ. ಹೀಗಾಗಿ ವೀಕೆಂಡ್ ಕರ್ಫ್ಯೂ, ನೈಟ್ಕರ್ಫ್ಯೂಗಳಿಂದ ನಷ್ಟ ಅನುಭವಿಸಿದ್ದ ಪ್ರವಾಸಿಗರ ಅವಲಂಬಿತ ವ್ಯಾಪಾರೋದ್ಯಮಿಗಳು ನಿರೀಕ್ಷಿತ ಪ್ರಮಾಣದಲ್ಲಿ ಲಾಭಗಳಿಸಲು ಸಾಧ್ಯವಾಗುತ್ತಿಲ್ಲ. ಇದನ್ನೂ ಓದಿ: ಕನ್ನಡಕ್ಕೂ ದನಿಗೂಡಿಸಿದ್ದ ಲತಾ ಮಂಗೇಶ್ಕರ್
ಮತ್ತೊಂದೆಡೆ 3ನೇ ಅಲೆಯಲ್ಲಿ ಕೋವಿಡ್ ಸೋಂಕಿನಿಂದ ಅಷ್ಟೊಂದು ಅಪಾಯವಿಲ್ಲ ಎನ್ನುವ ಕಾರಣದಿಂದ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಬರುತ್ತಿರುವ ಬಹುತೇಕ ಪ್ರವಾಸಿಗರು, ಕೊಡಗಿನ ಪ್ರವಾಸಿ ತಾಣಗಳಲ್ಲಿ ಮಾಸ್ಕ್ ಧರಿಸದೆ ತಮ್ಮ ಪಾಡಿಗೆ ತಾವು ಎಂಜಾಯ್ ಮಾಡುತ್ತಿದ್ದಾರೆ.
ಇದು ಮಾಸ್ಕ್ ಧರಿಸಿ ಓಡಾಡುವ ಪ್ರವಾಸಿಗರಲ್ಲಿ ಒಂದಷ್ಟು ಆತಂಕಕ್ಕೂ ಕಾರಣವಾಗಿದೆ. ಒಟ್ಟಿನಲ್ಲಿ ವೀಕೆಂಡ್ ಕರ್ಫ್ಯೂ ತೆರವಾದ 3 ವಾರಗಳ ಬಳಿಕ ಕೊಡಗಿನ ಪ್ರವಾಸೋದ್ಯಮ ಈಗಷ್ಟೇ ಚೇತರಿಕೆ ಕಾಣುತ್ತಿದೆ.