ನವದೆಹಲಿ: ಕೇಂದ್ರ ಸರ್ಕಾರ ಕೊರೊನಾ ಪೀಡಿತ ಜಿಲ್ಲೆಗಳ ವಲಯವಾರು ಪಟ್ಟಿಯನ್ನು ಪರಿಷ್ಕರಿಸಿದೆ. ಕಿತ್ತಳೆ ವಲಯದಲ್ಲಿದ್ದ ಜಿಲ್ಲೆಗಳನ್ನು ಹಸಿರು ವಲಯಕ್ಕೂ, ಕೆಂಪು ವಲಯದಲ್ಲಿದ್ದ ಜಿಲ್ಲೆಗಳು ಕಿತ್ತಾಳೆ ವಲಯದಲ್ಲಿ ಸ್ಥಾನ ಪಡೆದಿದೆ.
ಈ ಮೊದಲು ಕೊರೊನಾ ಪ್ರಕರಣ ದಾಖಲಾಗದ ಜಿಲ್ಲೆಗಳು ಹಸಿರು ವಲಯದಲ್ಲೂ, ಕಡಿಮೆ ಪ್ರಕರಣ ದಾಖಲಾದ ಜಿಲ್ಲೆಗಳು ಕಿತ್ತಳೆ ವಲಯಕ್ಕೂ, ಅತಿ ಹೆಚ್ಚು ಪ್ರಕರಣ ದಾಖಲಾದ ಜಿಲ್ಲೆಗಳು ಕೆಂಪು ವಲಯದಲ್ಲಿ ಸ್ಥಾನ ಪಡೆಯುತ್ತಿತ್ತು.
14 ದಿನಗಳಿಂದ ಯಾವುದೇ ಪ್ರಕರಣ ಬೆಳಕಿಗೆ ಬಾರದೇ ಇದ್ದಲ್ಲಿ ಕಿತ್ತಾಳೆ ವಲಯದಲ್ಲಿದ್ದ ಜಿಲ್ಲೆ ಹಸಿರು ಜಿಲ್ಲೆಯಾಗುತ್ತಿತ್ತು. ಕೆಂಪು ವಲಯಲ್ಲಿದ್ದ ಜಿಲ್ಲೆಯಲ್ಲಿ 14 ದಿನಗಳ ಕಾಲ ಕೊರೊನಾ ಬಾರದೇ ಇದ್ದಲ್ಲಿ ಕಿತ್ತಳೆ ವಲಯದಲ್ಲಿ, ಬಳಿಕ 14 ದಿನಗಳ ಕಾಲ ಯಾವುದೇ ಪ್ರಕರಣ ಬಾರದೇ ಇದ್ದಲ್ಲಿ ಹಸಿರು ವಲಯದಲ್ಲಿ ಸ್ಥಾನ ಪಡೆಯುತ್ತಿತ್ತು.
ಹೊಸ ಮಾನದಂಡ ಏನು?
ಈ ಮೊದಲು ಪ್ರಕರಣಗಳು ದ್ವಿಗುಣವಾಗುವುದರ ಮೇಲೆ ಕೆಂಪು, ಕಿತ್ತಳೆ, ಹಸಿರು ವಲಯಗಳನ್ನು ಪ್ರಕಟಿಸಲಾಗುತ್ತಿತ್ತು. ಈಗ ಗುಣಮುಖರಾಗುತ್ತಿರುವ ಸೋಂಕಿತರ ಸಂಖ್ಯೆ ಹಿನ್ನೆಲೆಯಲ್ಲಿ ಪರಿಷ್ಕರಣೆಗೊಳಿಸಲಾಗಿದೆ. ಹೊಸದಾಗಿ ಎಷ್ಟು ಪ್ರಕರಣಗಳು ದಾಖಲಾಗುತ್ತಿದೆ? ಎಷ್ಟು ದಿನಕ್ಕೆ ಪ್ರಕರಣ ದ್ವಿಗುಣವಾಗುತ್ತಿದೆ? ಎಷ್ಟು ರೋಗಿಗಳು ಗುಣಮುಖರಾಗುತ್ತಿದ್ದಾರೆ? ಎಷ್ಟು ಪರೀಕ್ಷೆ ನಡೆಯುತ್ತಿದೆ? ಪ್ರಸ್ತುತ ಜಿಲ್ಲೆಯಲ್ಲಿ ಕೋವಿಡ್ -19 ನಿಯಂತ್ರಣಕ್ಕೆ ಕೈಗೊಂಡ ಕ್ರಮ ಹೇಗಿದೆ? ಈ ಮಾನದಂಡಗಳನ್ನು ಆಧಾರಿಸಿ ಪರಿಷ್ಕೃತ ಜಿಲ್ಲೆಗಳ ವಲಯವಾರು ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಕಾರ್ಯದರ್ಶಿ ಪ್ರೀತಿ ಸುದನ್ ಎಲ್ಲ ರಾಜ್ಯಗಳ ಕಾರ್ಯದರ್ಶಿಗಳಿಗೆ ಪತ್ರ ಬರೆದು ತಿಳಿಸಿದ್ದಾರೆ.
ಪ್ರತಿ ವಾರಕ್ಕೊಮ್ಮೆ ಈ ಪಟ್ಟಿ ಬದಲಾಗುತ್ತದೆ. ಪ್ರಸ್ತುತ ದೇಶದಲ್ಲಿ 130 ಕೆಂಪು ವಲಯ, 284 ಕಿತ್ತಳೆ, 319 ಜಿಲ್ಲೆಗಳು ಹಸಿರು ವಲಯದಲ್ಲಿ ಸ್ಥಾನ ಪಡೆದಿದೆ. ಪರಿಷ್ಕರಣೆಯಿಂದಾಗಿ ಕರ್ನಾಟಕದಲ್ಲಿ 3 ಜಿಲ್ಲೆಗಳು ಕೆಂಪು ವಲಯದಲ್ಲಿ, 13 ಜಿಲ್ಲೆಗಳು ಕಿತ್ತಳೆ ವಲಯದಲ್ಲಿ, 14 ಜಿಲ್ಲೆಗಳು ಹಸಿರು ವಲಯದಲ್ಲಿ ಸ್ಥಾನ ಪಡೆದಿದೆ. ದಕ್ಷಿಣ ಕನ್ನಡ, ಬೆಳಗಾವಿ, ಕಲಬುರಗಿ, ಚಿಕ್ಕಬಳ್ಳಾಪುರವನ್ನು ಕೆಂಪು ವಲಯದಿಂದ ಕೈಬಿಟ್ಟಿದೆ.
ಯಾವ ಜಿಲ್ಲೆ ಯಾವ ವಲಯದಲ್ಲಿದೆ?
ಕೆಂಪು ವಲಯ: ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು
ಕಿತ್ತಳೆ ವಲಯ: ಬೆಳಗಾವಿ, ವಿಜಯಪುರ, ಕಲಬುರಗಿ, ಬಾಗಲಕೋಟೆ, ಮಂಡ್ಯ, ಬಳ್ಳಾರಿ, ಧಾರವಾಡ, ದಕ್ಷಿಣ ಕನ್ನಡ, ಬೀದರ್, ಚಿಕ್ಕಬಳ್ಳಾಪುರ, ಗದಗ್, ಉತ್ತರ ಕನ್ನಡ, ತುಮಕೂರು.
ಹಸಿರು ವಲಯ: ದಾವಣಗೆರೆ, ಉಡುಪಿ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಹಾವೇರಿ, ಕೊಡಗು, ಕೋಲಾರ, ಕೊಪ್ಪಳ, ರಾಯಚೂರು, ಶಿವಮೊಗ್ಗ, ರಾಮನಗರ, ಯಾದಗಿರಿ.