ಬೆಂಗಳೂರು: ರಾಜ್ಯ ಸರ್ಕಾರವು ಕೊರೊನಾ ಹರಡುವಿಕೆ ತಡೆಯಲು ಹಾಗೂ ಅದರ ನಿಯಂತ್ರಣಕ್ಕೆ ಹಲವಾರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಅದರ ಭಾಗವಾಗಿ, ಕೊರೊನಾ ವೈರಸ್ ಬಗ್ಗೆ ಹರಡುವ ವದಂತಿಗಳು ಹಾಗೂ ಅಪಪ್ರಚಾರಗಳನ್ನು ತಡೆದು ಜನರಿಗೆ ನೈಜ ಮಾಹಿತಿ ಒದಗಿಸಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಭಾರತೀಯ ರೆಡ್ ಕ್ರಾಸ್ ಸೊಸೈಟಿ ಹಾಗೂ ಕರ್ನಾಟಕ ರಾಜ್ಯ ಕಾರ್ಮಿಕ ಅಧ್ಯಯನ ಸಂಸ್ಥೆ ಸಹಯೋಗದಲ್ಲಿ ಪ್ರಾರಂಭಿಸಿರುವ ಕಾರ್ಯಕ್ರಮಕ್ಕೆ ಸ್ವಯಂ ಸೇವಕರನ್ನು ಆಹ್ವಾನಿಸಿದೆ.
ಸರ್ಕಾರದೊಂದಿಗೆ ಕೈಜೋಡಿಸಿ ಕೊರೊನಾ ವಿರುದ್ಧ ಹೋರಾಡಲು ಇದೊಂದು ಸದಾವಕಾಶವಾಗಿದೆ. ‘ಕೊರೊನಾ ಯೋಧ’ರೆಂದೇ ಕರೆಯಲ್ಪಡುವ ಈ ಸ್ವಯಂ ಸೇವಕರು ರಾಜ್ಯಾದ್ಯಂತ ಎಲ್ಲಾ ತಾಲೂಕುಗಳಲ್ಲಿ ಹರಡುವ ವದಂತಿಗಳ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ನೈಜ ಮಾಹಿತಿಯನ್ನು ಜನರಿಗೆ ತಲುಪಿಸಲು ಸಹಕಾರಿಯಾಗಲಿದ್ದಾರೆ. ಅಲ್ಲದೇ ಸ್ಥಳೀಯವಾಗಿ ಕೊರೊನಾ ಸಂಬಂಧಿತ ವಿದ್ಯಮಾನಗಳನ್ನು ತಂಡದ ಗಮನಕ್ಕೆ ತರಲು ಕ್ರಮವಹಿಸುವರು.
ಈಗಾಗಲೇ ಆನ್ಲೈನ್ ಮೂಲಕ ಅರ್ಜಿಗಳು ಸ್ವೀಕೃತವಾಗುತ್ತಿದ್ದು, ನೋಂದಾಯಿತ ಸ್ವಯಂ ಸೇವಕರಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಎಲ್ಲಾ ಜಿಲ್ಲಾ ಕಛೇರಿಗಳಲ್ಲಿ ಸೂಕ್ತ ತರಬೇತಿ, ಸುರಕ್ಷತಾ ಕಿಟ್ ಹಾಗೂ ಗುರುತಿನ ಚೀಟಿಯನ್ನು ನೀಡಲಾಗುವುದು.
ರಾಜ್ಯದ ಪ್ರತಿ ತಾಲೂಕಿನಲ್ಲಿ ಕನಿಷ್ಠ 4 ಸ್ವಯಂಸೇವಕರು ದಿನಕ್ಕೆ ನಾಲ್ಕು ಪಾಳಿಗಳಲ್ಲಿ ಕಾರ್ಯ ನಿರ್ವಹಿಸುವರು. ಬೆಂಗಳೂರು ನಗರದಲ್ಲೆ ಸುಮಾರು 120 ಸ್ವಯಂ ಸೇವಕರಿಗೆ ಅವಕಾಶವಿದ್ದು, ರಾಜ್ಯಾದ್ಯಂತ ಸುಮಾರು 3000 ಕೊರೊನಾ ಯೋಧರು ನೋಂದಾಯಿಸುವ ನಿರೀಕ್ಷೆಯಿದೆ. ಆನ್ಲೈನ್ ಅರ್ಜಿ ಮೂಲಕ ಮೊದಲ ದಿನವೇ 400 ಕ್ಕೂ ಹೆಚ್ಚು ಸ್ವಯಂ ಸೇವಕರು ನೋಂದಾಯಿಸಿಕೊಂಡಿದ್ದಾರೆ.
ನೀವೂ ಸಹ ಈ ಹೋರಾಟದಲ್ಲಿ ಸರ್ಕಾರದೊಂದಿಗೆ ಕೈ ಜೋಡಿಸಲು ಬಯಸಿದ್ದರೆ, https://covid19.karnataka.gov.in/coronawarrior.html ನಲ್ಲಿ ನೋಂದಾಯಿಸಿಕೊಳ್ಳಿ. ಜನರಲ್ಲಿ ವದಂತಿಗಳು ಹುಟ್ಟುಹಾಕುವ ಆತಂಕವನ್ನು ತಡೆದು, ನೈಜ ಮಾಹಿತಿಯನ್ನು ನೀಡಲು ಸಹಕರಿಸಿ.