ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿದಂತೆ ನಾಲ್ವರ ವಿರುದ್ಧ ದೆಹಲಿ ಕೋರ್ಟ್ ದೋಷರೋಪ ನಿಗದಿ ಮಾಡಿದೆ.
2014 ರಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ನಿಷೇಧಾಜ್ಞೆಯ ಉಲ್ಲಂಘನೆ ಹಾಗೂ ಆಂದೋಲನದ ಸಂದರ್ಭದಲ್ಲಿ ಸರ್ಕಾರಿ ನೌಕರರನ್ನು ತಡೆದಿದ್ದಕ್ಕೆ ಪ್ರಕರಣ ನಡೆದಿತ್ತು. ಈ ಕುರಿತು ನ್ಯಾಯಾಲಯ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ರಾಖಿ ಬಿರ್ಲಾ ಹಾಗೂ ಸೋಮ್ನಾಥ್ ಭಾರತಿ ಅವರ ವಿರುದ್ಧ ದೋಷ ನಿಗದಿ ಮಾಡಿದೆ. ಈ ಪ್ರಕರಣದಿಂದ ಅಶುತೋಷ್ ಮತ್ತು ಸಂಜಯ್ ಸಿಂಗ್ ಅವರನ್ನು ಕೈ ಬಿಟ್ಟಿದೆ.
ವಕೀಲರಾದ ರಿಷಿಕೇಶ್ ಕುಮಾರ್ ಮತ್ತು ಮೊಹದ್ ಇರ್ಷಾದ್ ಅವರು ಮುಖ್ಯಮಂತ್ರಿ ಕೇಜ್ರಿವಾಲ್, ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹಾಗೂ ಸಂಜಯ್ ಸಿಂಗ್ ಅವರ ಪರ ವಾದ ಮಂಡಿಸಿದರು. ಅಶುತೋಷ್ ಹಾಗೂ ಸೋಮ್ನಾಥ್ ಭಾರತಿ ಅವರು ವೈಯಕ್ತಿಕವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದರು.
ಎನಿದು ಪ್ರಕರಣ?
2014ರ ಜನವರಿಯಲ್ಲಿ ದಕ್ಷಿಣ ದೆಹಲಿಯಲ್ಲಿ ನಡೆಯುತ್ತಿರುವ ಡ್ರಗ್ಸ್ ಹಾಗೂ ವೇಶ್ಯಾವಾಟಿಕೆ ದಂಧೆಯ ಅಡ್ಡೆ ಮೇಲೆ ದಾಳಿ ನಡೆಸುವುದನ್ನು ನಿರಾಕರಿಸಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರೈಲು ಭವನದ ಹೊರಗಡೆ ಧರಣಿ ನಡೆಸಿದ್ದರು. ನಿಷೇಧಾಜ್ಞೆಯನ್ನು ಉಲ್ಲಂಘಿಸಿದ್ದು ಮತ್ತು ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿ ಪ್ರತಿಭಟಿಸಿದ್ದಾರೆ ಎಂದು ಆರೋಪಿಸಿ 6 ಮಂದಿಯ ವಿರುದ್ಧ ಪೊಲೀಸರು ಚಾರ್ಜ್ಶೀಟ್ ದಾಖಲಿಸಿದ್ದರು.