ವಿಶಾಖಪಟ್ಟಣಂ: ದಂಪತಿ ತಮ್ಮ ಇಬ್ಬರು ಮಕ್ಕಳಿಗೆ ವಿಷವುಣಿಸಿ ಬಳಿಕ ತಾವೂ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂ ನಲ್ಲಿ ನಡೆದಿದೆ.
ಡಿ. ರಾಜೇಶ್ ರೆಡ್ಡಿ, ಪತ್ನಿ ಸೌಮ್ಯಾ ಹಾಗೂ ಮಕ್ಕಳಾದ 9 ವರ್ಷದ ಡಿ.ವಿಷ್ಣುತೇಜಾ ಮತ್ತು 5 ವರ್ಷದ ಡಿ.ಜಾಹ್ನವಿ ಮೃತಪಟ್ಟಿದ್ದಾರೆ. ರಾಜೇಶ್ ರೆಡ್ಡಿ ಎಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿದ್ದರು. ಈ ಘಟನೆ ಗುರುವಾದ ಸಂಜೆ ನಗರದ ಅರಿಲೋವಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಮುಸ್ತಫ ಕಾಲೋನಿಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಜೇಶ್ ಮತ್ತು ಸೌಮ್ಯ ಮೂಲತಃ ಪ್ರಕಾಶಂ ಜಿಲ್ಲೆಯವರಾಗಿದ್ದು, ಜೀವನೋಪಾಯಕ್ಕಾಗಿ ಕೆಲಸ ಹುಡುಕಿಕೊಂಡು ಕಳೆದ ವರ್ಷದ ಜುಲೈನಲ್ಲಿ ವಿಶಾಖಪಟ್ಟಣಂಗೆ ಬಂದಿದ್ದರು. ಆದರೆ ಹಣಕಾಸು ಸಮಸ್ಯೆ ಹಿನ್ನೆಲೆಯಲ್ಲಿ ರಾಜೇಶ್ ಮತ್ತು ಸೌಮ್ಯಾ ತಮ್ಮ ಮಕ್ಕಳಿಗೆ ವಿಷ ಹಾಕಿ ನಂತರ ಇಬ್ಬರೂ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಎಸಿಪಿ ಪಿ. ರಾಮಚಂದ್ರ ರಾವ್ ತಿಳಿಸಿದ್ದಾರೆ.
ದಂಪತಿ ಆತ್ಮಹತ್ಯೆಗೂ ಮುನ್ನ ಡೆತ್ನೋಟ್ ಬರೆದಿದ್ದು, ಕುಟುಂಬ ಕಲಹ ಮತ್ತು ಹಣಕಾಸಿನ ತೊಂದರೆಯಿಂದ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ. ನಮ್ಮ ಸಾವಿಗೆ ಯಾರೂ ಕಾರಣರಲ್ಲ ಅಂತ ತಿಳಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.