ಹಾಸನ: ಸುತ್ತಾಡಿಕೊಂಡು ಬರುತ್ತೇವೆ ಎಂದು ಹೊರಟಿದ್ದ ನವದಂಪತಿಯ ಶವ ಹೇಮಾವತಿ ನದಿಯಲ್ಲಿ ಪತ್ತೆಯಾಗಿರುವ ಮನಕಲಕುವ ಘಟನೆ ಜಿಲ್ಲೆ ಸಕಲೇಶಪುರ ತಾಲೂಕಿನ ಹೆನ್ನಲಿ ಗ್ರಾಮದಲ್ಲಿ ನಡೆದಿದೆ.
ಬೇಲೂರು ತಾಲೂಕು ಮುರಹಳ್ಳಿ ಗ್ರಾಮದ ಅರ್ಥೇಶ್ (27) ಹಾಗೂ ಹೆನ್ನಲಿ ಗ್ರಾಮದ ಕೃತಿಕಾ (23) ಮೃತ ದಂಪತಿ. ಕಳೆದ ಎರಡು ತಿಂಗಳ ಹಿಂದೆಯಷ್ಟೆ ಇವರಿಬ್ಬರ ಮದುವೆಯಾಗಿತ್ತು. ಅರ್ಥೇಶ್ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಲಾಕ್ಡೌನ್ ಹಿನ್ನೆಲೆಯಲ್ಲಿ ತನ್ನ ಸ್ವಗ್ರಾಮ ಬೇಲೂರು ತಾಲೂಕಿನ ಮುರಹಳ್ಳಿ ಗ್ರಾಮಕ್ಕೆ ಕಳೆದ ಕೆಲವು ದಿನಗಳ ಹಿಂದಷ್ಟೆ ಬಂದಿದ್ದ.
ಬುಧವಾರ ಹೆನ್ನಲಿ ಗ್ರಾಮದಲ್ಲಿರುವ ಪತ್ನಿ ಕೃತಿಕಾ ಮನೆಗೆ ಬಂದಿದ್ದನು. ಗುರುವಾರ ಸಂಜೆ ದಂಪತಿ ತಿರುಗಾಡಿಕೊಂಡು ಬರುತ್ತೇವೆ ಎಂದು ಬೈಕ್ನಲ್ಲಿ ಹೊರ ಹೋಗಿದ್ದಾರೆ. ಆದರೆ ತುಂಬಾ ಸಮಯವಾದರು ಮನೆಗೆ ವಾಪಸ್ ಆಗದ ಕಾರಣ ಮನೆಯವರು ಫೋನ್ ಮಾಡಿದ್ದಾರೆ. ಆದರೆ ಇಬ್ಬರ ಮೊಬೈಲ್ ಸ್ಬಿಚ್ ಆಫ್ ಆಗಿತ್ತು. ಕೊನೆಗೆ ಮನೆಯವರು ಅವರನ್ನು ಹುಡುಕಲು ಶುರುಮಾಡಿದ್ದರು.
ಈ ಸಂರ್ದಭದಲ್ಲಿ ಹೇಮಾವತಿ ನದಿ ಸಮೀಪದ ರಸ್ತೆಯಲ್ಲಿ ಬೈಕ್ ಕಾಣಿಸಿದೆ. ಇಬ್ಬರನ್ನು ಹುಡುಕುತ್ತಾ ಹೊರಟಾಗ ಮೀನುಗಾರರು ಹಾಕಿದ್ದ ಬಲೆಗೆ ಕೃತಿಕಾ ಶವ ಸಿಕ್ಕಿದೆ. ನಂತರ ಅರ್ಥೇಶ್ ಮೃತದೇಹ ಕೂಡ ಸಿಕ್ಕಿದೆ. ನವದಂಪತಿ ಸಾವಿನ ಬಗ್ಗೆ ಹಲವು ಅನುಮಾನಗಳು ಹುಟ್ಟಿಕೊಂಡಿದ್ದು, ನದಿಯ ಬಳಿ ಸೆಲ್ಫೀ ತೆಗೆಯಲು ಹೋದಾಗ ಕಾಲು ಜಾರಿ ಬಿದ್ದು ಸಾವನ್ನಪ್ಪಿರಬಹುದು ಎನ್ನಲಾಗಿದೆ.
ಘಟನೆ ಬಗ್ಗೆ ಮಾಹಿತಿ ತಿಳಿದು ಸಕಲೇಶಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದ್ದು, ಈ ಕುರಿತು ಸಕಲೇಶಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.