ಮಡಿಕೇರಿ: ಪರಿಹಾರಕ್ಕಾಗಿ ತಮ್ಮ ಮಗ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾನೆಂದು ಸುಳ್ಳು ಹೇಳಿ ದಂಪತಿ ಸಿಕ್ಕಿಬಿದ್ದ ಘಟನೆ ಮಡಿಕೇರಿ ನಗರದ ಮೈತ್ರಿ ಭವನದಲ್ಲಿ ನಡೆದಿದೆ.
ಭೂ ಕುಸಿತದ ಸಂದರ್ಭ ಮನೆಯಿಂದ ಓಡಿ ಬರುವಾಗ ಕೈಯಲ್ಲಿದ್ದ ಏಳು ವರ್ಷದ ಮಗ ಪ್ರವಾಹದಲ್ಲಿ ಬಿದ್ದು ಕೊಚ್ಚಿ ಹೋಗಿದ್ದಾನೆ ಎಂದು ಪರಿಹಾರದ ಆಸೆಗಾಗಿ ಮಾಧ್ಯಮಗಳಿಗೆ ಸುಳ್ಳು ಹೇಳಿರುವುದು ಬಹಿರಂಗವಾಗಿದ್ದು, ಪೊಲೀಸರು ದಂಪತಿಯನ್ನು ವಶಕ್ಕೆ ಪಡೆದಿದ್ದಾರೆ.
ಮಹಾಮಳೆ ಹಾಗೂ ಭೂ ಕುಸಿತದಿಂದಾಗಿ ಜಿಲ್ಲೆಯಲ್ಲಿ ಸಾವಿರಾರು ಮಂದಿ ನಿರಾಶ್ರಿತರಾಗಿದ್ದು, ಪುನರ್ ವಸತಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಪರಿಹಾರಕ್ಕಾಗಿ ಹಲವು ಮಂದಿ ನಿರಾಶ್ರಿತರೆಂದು ಸೌಲಭ್ಯ ಪಡೆಯುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬಂದಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ಮಗನೇ ಬಲಿಯಾಗಿದ್ದಾನೆ ಎಂದು ಹಾಗೂ ತಾವು ನೋಡದ ಕಾಲೂರಿನ ನಿವಾಸಿಗಳೆಂದು ಇವರು ವಂಚಿಸಿದ್ದು, ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.
ಆಗಸ್ಟ್ 23ರಂದು ಮಡಿಕೇರಿಯ ಮೈತ್ರಿ ಭವನದಲ್ಲಿರುವ ನಿರಾಶ್ರಿತರ ಶಿಬಿರಕ್ಕೆ ಸೋಮಶೇಖರ್ ಹಾಗೂ ಸುಮಾ ಆಗಮಿಸಿದರು. ತಾವು ಕಾಲೂರು ಗ್ರಾಮದವರಾಗಿದ್ದು, ಭೂ ಕುಸಿತಕ್ಕೆ ಸಿಲುಕಿ ತಮ್ಮ ಮನೆ ಕೊಚ್ಚಿಕೊಂಡು ಹೋಗಿದೆ. ನಾವು ಮನೆಯಿಂದ ಹೊರಗೋಡಿ ಬಂದಿದ್ದು, ತಪ್ಪಿಸಿಕೊಂಡು ಬರುವ ಸಂದರ್ಭ ಕೈಯಲ್ಲಿದ್ದ ಏಳು ವರ್ಷದ ಮಗ ಗಗನ್ ಗಣಪತಿ ನೀರಿನಲ್ಲಿ ಬಿದ್ದು ಕೊಚ್ಚಿಕೊಂಡು ಹೋಗಿದ್ದಾನೆ ಎಂದು ಹೇಳಿದರು. ನಿಮ್ಮ ಪಬ್ಲಿಕ್ ಟಿವಿ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದರು. ಆದರೆ ಅದು ಈಗ ಸುಳ್ಳು ಆಗಿದ್ದು, ಇಬ್ಬರು ಪೊಲೀಸರ ಅತಿಥಿಯಾಗಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv