ಯಾದಗಿರಿ: ಕೃಷ್ಣಾ ನದಿ ಪ್ರವಾಹದಿಂದ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಂಡ ಹಿನ್ನೆಲೆಯಲ್ಲಿ ಟ್ರ್ಯಾಕ್ಟರ್ ಲೈಟ್ ಬೆಳಕಿನಲ್ಲಿಯೇ ನವ ಜೋಡಿಯ ನಿಶ್ಚಿತಾರ್ಥ ನಡೆದ ಅಪರೂಪದ ಘಟನೆ ನಡೆದಿದೆ.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನೀಲಕಂಠರಾಯನಗಡ್ಡಿಯಲ್ಲಿ ಈ ಅಪರೂಪದ ನಿಶ್ಚಿತಾರ್ಥ ನಡೆದಿದೆ. ಟ್ರ್ಯಾಕ್ಟರ್ ಲೈಟ್ ಬೆಳಕಿನಲ್ಲಿ ಗ್ರಾಮದ ಅಮರಪ್ಪ, ದುರ್ಗಮ್ಮ ದಂಪತಿಯ ಮಗಳಾದ ಮಾದ್ಯಮ್ಮ ಎಂಬವರ ನಿಶ್ಚಿತಾರ್ಥ ಮಾಡಿಕೊಡಲಾಗಿದೆ.
ಎಲ್ಲಾ ಸರಿ ಇದ್ದಿದರೆ ಮಾದ್ಯಮ್ಮ ಹಾಗೂ ಸೋಮಣ್ಣ ನಿಶ್ಚಿತಾರ್ಥ ಕಾರ್ಯಕ್ರಮ, ವಿದ್ಯುತ್ ಬೆಳಕು ಇಲ್ಲವೇ ಸೋಲಾರು ಬೆಳಕಿನಲ್ಲಿ ನಡೆಯುತ್ತಿತ್ತು. ಆದರೆ ಕಳೆದ ಆಗಸ್ಟ್ ನಲ್ಲಿ ಬಂದ ಕೃಷ್ಣಾ ನದಿ ಪ್ರವಾಹಕ್ಕೆ ಗಡ್ಡಿ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಈ ಹಿನ್ನೆಲೆ ಕಳೆದ ಮೂರು ತಿಂಗಳಿನಿಂದ ಗಡ್ಡಿ ಜನರು ಕಗ್ಗತ್ತಲಲ್ಲಿಯೇ ವಾಸ ಮಾಡುತ್ತಿದ್ದಾರೆ. ಇದರಿಂದ ನಿಶ್ಚಿತಾರ್ಥಕ್ಕೂ ವಿದ್ಯುತ್ ಬೆಳಕು ಸಿಗದಂತಾಗಿದೆ.
ಅಲ್ಲದೆ ಗ್ರಾಮದಲ್ಲಿ ತಾತ್ಕಾಲಿಕವಾಗಿ ಸೋಲಾರ ವ್ಯವಸ್ಥೆ ಮಾಡಲಾಗಿತ್ತು. ಆದರೆ ಅದು ಸಹ ಸಂಪೂರ್ಣ ಹಾಳಾಗಿದೆ, ಹೀಗಾಗಿ ನೀಲಕಂಠರಾಯನಗಡ್ಡಿ ಗ್ರಾಮದ ಜನರು ಮೂರು ತಿಂಗಳಿನಿಂದ ಕತ್ತಲಲ್ಲಿದ್ದಾರೆ. ಜೆಸ್ಕಾಂ ಅಧಿಕಾರಿಗಳು ಪ್ರವಾಹ ತಗ್ಗಿದ ಬಳಿಕ ಕಂಬಗಳ ಅಳವಡಿಸಿ ಈ ಗ್ರಾಮಕ್ಕೆ ಬೆಳಕಿನ ಭಾಗ್ಯ ಕಲ್ಪಿಸಬೇಕಾಗಿತ್ತು. ಆದರೆ ಅಧಿಕಾರಿಗಳು ನಿಷ್ಕಾಳಜಿ ತೋರುತ್ತಿದ್ದು, ನೀಲಕಂಠರಾಯನ ಗಡ್ಡಿ ಗ್ರಾಮಸ್ಥರು ಅಧಿಕಾರಿಗಳಿಗೆ ಶಾಪ ಹಾಕುತ್ತಿದ್ದಾರೆ.