ಕಾರವಾರ: ಸಾವಿನಲ್ಲೂ ದಂಪತಿ ಒಂದಾದ ಘಟನೆ ಜಿಲ್ಲೆಯ ಶಿರಸಿಯಲ್ಲಿ ನಡೆದಿದ್ದು, ಪತಿ ಸಾವು ಕಂಡ ಪತ್ನಿ ಕೂಡ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ತಾಲೂಕಿನ ಗುಬ್ಬಿಮನೆಯ ಗಣಪತಿ ಲೊಕೇಶ ಹೆಗಡೆ (81) ಹಾಗೂ ಭಾಗೀರಥಿ ಹೆಗಡೆ (70) ಸಾವಿನಲ್ಲೂ ಒಂದಾದ ಆದರ್ಶ ದಂಪತಿಗಳಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಗಣಪತಿ ಹೆಗಡೆ ನಾಲ್ಕು ದಿನದ ಹಿಂದೆ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರು. ಪತ್ನಿ ಅವರ ನೆರವಿಗೆ ನಿಂತು ಸೇವೆ ಮಾಡಿದ್ದರು. ಆದರೆ ಚಿಕಿತ್ಸೆ ಫಲಿಸದೆ ಅವರು ಸಾವನ್ನಪ್ಪಿದ್ದರು.
ಪತಿಯ ಸಾವಿನಿಂದ ದುಃಖಿತರಾದ ಪತ್ನಿ, ಪತಿಯ ಮೃತದೇಹದೊಂದಿಗೆ ಭಾನುವಾರ ಸಂಜೆ ಮನೆಗೆ ಬಂದಿದ್ದರು. ಈ ವೇಳೆ ಪತಿಯನ್ನು ಕಳೆದುಕೊಂಡ ಅವರು ತೀವ್ರ ಆಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ. ಸದ್ಯ ಮನೆಯ ಹಿರಿಯರಿಬ್ಬರನ್ನೂ ಕಳೆದುಕೊಂಡ ಅವರ ಕುಟುಂಬಸ್ಥರಲ್ಲಿ ದುಃಖ ಮನೆ ಮಾಡಿದೆ. ಈ ನಡುವೆ ಇಬ್ಬರ ಮೃತದೇಹವನ್ನು ಒಂದೇ ಚಿತೆಯಲ್ಲಿಟ್ಟು, ಕುಟುಂಬಸ್ಥರು ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.