ಹಾಸನ: ಮದುವೆಯಾಗಿ ದಂಪತಿಯಾಗಬೇಕಿದ್ದ ವಧು ಮತ್ತು ವರ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಹಾಸನದಲ್ಲಿ ನಡೆದಿದೆ.
ತುಮಕೂರು ಜಿಲ್ಲೆಯ ವಧು ರಾಧಿಕಾ(25) ವರ ಸುಪ್ರೀತ್(27) ಮತ್ತು ಮಾನಸಿಕ ಅಸ್ವಸ್ಥ ಮಹಿಳೆ ರತ್ನಮ್ಮ (40) ಮೃತಪಟ್ಟಿದ್ದಾರೆ. ಆಲೂರು ತಾಲೂಕಿನ ಪಾಳ್ಯ ಬಳಿ ಈ ಅಪಘಾತ ಸಂಭವಿಸಿ ರಾಧಿಕಾ ಮತ್ತು ರತ್ನಮ್ಮ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ವರ ಸುಪ್ರೀತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಅಪಘಾತ ಹೇಗಾಯ್ತು?
ಫೆಬ್ರವರಿ 5 ರಂದು ಮದುವೆ ನಡೆಯಲಿರುವ ಹಿನ್ನೆಲೆಯಲ್ಲಿ ವಿವಾಹ ಪೂರ್ವ ಫೋಟೋ ಶೂಟ್ ಮಾಡಲು ರಾಧಿಕಾ, ಸುಪ್ರೀತ್ ಮತ್ತು ರಾಧಿಕಾ ತಾಯಿ ಕಾರಿನಲ್ಲಿ ಹಾಸನದ ಶೆಟ್ಟಿಹಳ್ಳಿ ಚರ್ಚ್ನಲ್ಲಿ ಮುಗಿಸಿ ಮಂಜ್ರಾಬಾದ್ ಕೋರ್ಟ್ ಕಡೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ಅಸ್ವಸ್ಥ ಮಹಿಳೆ ಅಡ್ಡ ಬಂದಿದ್ದಾರೆ. ಆಕೆಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಚಾಲಕ ಕಾರಿನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದ್ದಾನೆ. ಸ್ಥಳದಲ್ಲಿಯೇ ವಧು ರಾಧಿಕ ಮತ್ತು ಅಸ್ವಸ್ಥ ಮಹಿಳೆ ಇಬ್ಬರು ಮೃತಪಟ್ಟಿದ್ದಾರೆ.
ಅಪಘಾತದಿಂದ ಕಾರಿನಲ್ಲಿದ್ದ ಕ್ಯಾಮೆರಾಮನ್ಗೆ ಮತ್ತು ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಸುಪ್ರೀತ್ ಮತ್ತು ರಾಧಿಕ ತಾಯಿ ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ವರ ಸುಪ್ರೀತ್ ಕೂಡ ಮೃತಪಟ್ಟಿದ್ದಾರೆ.
ಕ್ಯಾಮೆರಾ ಮನ್ ಮತ್ತು ಚಾಲಕನಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಸಂಬಂಧ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.