ಶಿವಮೊಗ್ಗ: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಆಗರದಳ್ಳಿ ಕ್ಯಾಂಪಿನಲ್ಲಿ ನಡೆದಿದೆ.
ಸಂತೋಷ್ (32) ಹಾಗೂ ಪಾರ್ವತಿ (27) ಮೃತ ದಂಪತಿ. ಭಾನುವಾರ ಭೂಮಿ ಹುಣ್ಣಿಮೆ ಹಬ್ಬ ಇದ್ದಿದ್ದರಿಂದ ಮನೆಯವರಿಗೆಲ್ಲ ತಾವೇ ಅಡುಗೆ ಸಿದ್ಧಪಡಿಸಿದ್ದರು. ಭೂಮಿ ಪೂಜೆಗೆ ಮನೆಯವರನ್ನೆಲ್ಲ ಗದ್ದೆಗೆ ಕಳುಹಿಸಿ, ನೀವೆಲ್ಲ ಹೋಗಿ ಪೂಜೆ ಮಾಡುತ್ತೀರಿ. ನಾವು ನಂತರ ಬರುತ್ತೇವೆ ಎಂದು ಹೇಳಿ ಕಳುಹಿಸಿದ್ದರು.
ಕುಟುಂಬಸ್ಥರು ಗದ್ದೆಗೆ ತೆರಳುತ್ತಿದ್ದಂತೆ ಮನೆಯಲ್ಲಿಯೇ ಸಂತೋಷ್ ಹಾಗೂ ಪಾರ್ವತಿ ಒಂದೇ ಸೀರೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತರ ಶವವನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ನೀಡಲಾಯಿತು.
ಈ ಘಟನೆ ಸಂಬಂಧ ಹೊಳೆ ಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಆತ್ಮಹತ್ಯೆಗೆ ಮಾನಸಿಕ ಖಿನ್ನತೆಯೇ ಕಾರಣನಾ ಅಥವಾ ಬೇರೆ ಕಾರಣ ಇರಬಹುದೋ ಎಂಬುದು ಪೊಲೀಸರ ತನಿಖೆ ನಡೆಸುತ್ತಿದ್ದಾರೆ.