ರಾಮನಗರ: ಗ್ರಾಮ ಯುವಕ ಪತ್ನಿಗೆ ಕಿಸ್ ಮಾಡುತ್ತಿರುವ ಫೋಟೋಗಳು ಬಹಿರಂಗವಾದ ಹಿನ್ನೆಲೆಯಲ್ಲಿ ಪತಿ, ಪತ್ನಿ ಇಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಸಾದರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಲೋಕೇಶ್ ಹಾಗೂ ಕೌಸಲ್ಯ ನೇಣಿಗೆ ಶರಣಾದ ದಂಪತಿಗಳಾಗಿದ್ದು, ಇದೇ ಗ್ರಾಮದ ತ್ಯಾಗರಾಜ್ರೊಂದಿಗೆ ಕೌಸಲ್ಯ ಇರುವ ಫೋಟೋಗಳು ಗ್ರಾಮದಲ್ಲಿ ವೈರಲ್ ಆಗಿತ್ತು. ಅಲ್ಲದೇ ತ್ಯಾಗರಾಜ್, ಕೌಸಲ್ಯಗೆ ಕಿಸ್ ಮಾಡುತ್ತಿರುವ ಫೋಟೋ ಕೂಡ ಆಕೆಯ ಪತಿಗೆ ಲಭಿಸಿತ್ತು. ಪರಿಣಾಮ ಗ್ರಾಮದಲ್ಲಿ ಇಬ್ಬರ ಬಗ್ಗೆ ಚರ್ಚೆಯಾಗಿತ್ತು. ಇದರಿಂದ ಮನನೊಂದ ದಂಪತಿ ಮರ್ಯಾದೆಗೆ ಅಂಜಿ ನೇಣಿಗೆ ಶರಣಾಗಿದ್ದಾರೆ.
ಏನಿದು ಪ್ರಕರಣ:
ಕೆಲ ದಿನಗಳ ಹಿಂದೆ ಕೌಸಲ್ಯ, ತ್ಯಾಗರಾಜ್ನೊಂದಿಗೆ ಮನೆಬಿಟ್ಟು ತೆರಳಿದ್ದಳು, ಇಬ್ಬರ ನಡುವೆ ಅನೈತಿಕ ಸಂಬಂಧ ಇತ್ತು ಎಂಬ ಮಾಹಿತಿ ಲಭಿಸಿದೆ. ಮನೆಯಿಂದ ಹೊರ ತೆರಳಿದ್ದ ಇಬ್ಬರು ಬೆಂಗಳೂರು ನಗರದ ಸಮೀಪವೊಂದರ ಸ್ಥಳಕ್ಕೇ ಭೇಟಿ ನೀಡಿ ಸಮಯ ಕಳೆದಿದ್ದರು. ಆದರೆ ಇಂದು ಲೋಕೇಶ್ ಪತ್ನಿಯನ್ನು ಹುಡುಕಿ ಮತ್ತೆ ಆಕೆಯನ್ನ ಮನೆಗೆ ಕರೆತಂದಿದ್ದ. ಅಲ್ಲದೇ ಇಬ್ಬರ ನಡುವೆ ಪಂಚಾಯಿತಿ ನಡೆಸಿ ಮತ್ತೆ ಕೌಸಲ್ಯ ವಿಚಾರಕ್ಕೆ ಬರದಂತೆ ದೇವರ ಮೇಲೆ ಹಣೆ ಪ್ರಮಾಣ ಕೂಡ ಮಾಡಿಸಿದ್ದ. ಆದರೆ ಇದರಿಂದ ಬುದ್ಧಿ ಕಲಿಯದ ತ್ಯಾಗರಾಜ್, ಕೌಸಲ್ಯ ತನ್ನೊಂದಿಗೆ ಕಳೆದಿದ್ದ ಸಮಯದ ಕೆಲ ಫೋಟೋಗಳನ್ನು ಆಕೆಯ ಪತಿಗೆ ಕಳುಹಿಸಿದ್ದ. ಅಲ್ಲದೇ ಗ್ರಾಮ ಕೆಲ ಯುವಕರ ಮೊಬೈಲ್ಗೂ ಅದನ್ನು ಶೇರ್ ಮಾಡಿದ್ದ.
ಫೋಟೋದಲ್ಲಿ ತ್ಯಾಗರಾಜ, ಕೌಸಲ್ಯಗೆ ಕಿಸ್ ಮಾಡುತ್ತಿರುವ ಹಾಗೂ ಸಲಿಗೆಯಿಂದ ಇರುವ ದೃಶ್ಯಗಳು ಇತ್ತು. ಫೋಟೋ ನೋಡಿದ ಪತಿ ಲೋಕೇಶ್ ಘಟನೆಯಿಂದ ಸಾಕಷ್ಟು ನೊಂದು ಕೊಂಡಿದ್ದ. ಅಲ್ಲದೇ ಈ ಫೋಟೋ ವಿಚಾರವಾಗಿಯೇ ದಂಪತಿ ನಡುವೆ ಜಗಳ ಕೂಡ ನಡೆದಿತ್ತು. ಈ ಜಗಳ ಬೆನ್ನಲ್ಲೇ ಫೋಟೋಗಳು ಗ್ರಾಮದಲ್ಲಿಯೂ ಕೂಡ ಹಾರಿದಾಡಿದ್ದು, ಕುಟುಂಬಸ್ಥರಿಗೆ ತೀವ್ರ ನೋವುಂಟು ಮಾಡಿತ್ತು.
ಗ್ರಾಮದಲ್ಲಿ ತಮ್ಮ ಬಗ್ಗೆ ಚರ್ಚೆ ನಡೆಯುತ್ತಿರುವ ಬಗ್ಗೆ ನೊಂದ ದಂಪತಿ ಮನೆಯ ಕೊಠಡಿಗೆ ತೆರಳಿ ಒಂದೇ ಹಗ್ಗಕ್ಕೆ ನೇಣಿ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇತ್ತ ದಂಪತಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಕೇಳುತ್ತಿದಂತೆ ಗ್ರಾಮಸ್ಥರು ಘಟನೆಗೆ ತ್ಯಾಗರಾಜನೇ ಕಾರಣ ಎಂದು ಆತನ ಮನೆಯ ಮೇಲೆ ದಾಳಿ ನಡೆಸಿ ಧ್ವಂಸ ಮಾಡಿದ್ದಾರೆ. ಅಲ್ಲದೇ ತ್ಯಾಗರಾಜಗೆ ಕುಟುಂಬಕ್ಕೆ ಸೇರಿದ್ದ ಒಂದು ಟ್ರ್ಯಾಕ್ಟರ್, ಎರಡು ಕಾರು ಹಾಗೂ ಮನೆಗೆ ಬೆಂಕಿ ಇಟ್ಟಿದ್ದಾರೆ. ಘಟನೆಯಲ್ಲಿ ನಾಲ್ಕು ಬೈಕ್, ನಾಲ್ಕು ಸೈಕಲ್, ಒಂದು ಆಟೋ, ಒಂದು ಇನ್ನೋವಾ, ಒಂದು ಸ್ವಿಫ್ಟ್ ಕಾರು, ಎರಡು ಟ್ರ್ಯಾಕ್ಟರ್ ಹಾಗೂ ಒಂದು ಗುಡಿಸಲು ಸಂಪೂರ್ಣ ಭಸ್ಮವಾಗಿದೆ.
ಮನೆಯಲ್ಲಿ ತ್ಯಾಗರಾಜ್ ಕುಟುಂಬ ಇರುವಾಗಲೇ ಮನೆಯ ಹೊರ ಭಾಗದಲ್ಲಿ ಬೆಂಕಿ ಹಚ್ಚಿದ್ದು, ಪರಿಣಾಮ ಕುಟುಂಬಸ್ಥರು ಆತಂಕಗೊಂಡಿದ್ದರು. ಘಟನೆ ಬಗ್ಗೆ ಮಾಹಿತಿ ಪಡೆದ ಅಕ್ಕೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ನಡೆಸಿದರು. ಅಲ್ಲದೇ ಮನೆಯಲ್ಲಿದ್ದ ತ್ಯಾಗರಾಜ್ ಹಾಗೂ ಆತನ ಕುಟುಂಬಸ್ಥರನ್ನು ಗ್ರಾಮಸ್ಥರಿಂದ ರಕ್ಷಿಸಿ ಪೊಲೀಸ್ ಠಾಣೆಗೆ ಕರೆದ್ಯೊದಿದ್ದಾರೆ. ಆದರೆ ಆರೋಪಿಗಳನ್ನು ಗ್ರಾಮಕ್ಕೆ ಕರೆತರುವವರೆಗೂ ಮೃತ ದೇಹಗಳನ್ನು ಮನೆಯಿಂದ ತೆಗೆದುಕೊಂಡು ಬಿಡುವುದಿಲ್ಲ ಎಂದು ಲೋಕೇಶ್ ಕುಟುಂಸ್ಥರು ಆಗ್ರಹಿಸಿದ್ದರು. ಆದರೆ ಕುಟುಂಸ್ಥರನ್ನು ಮನವೊಲಿಸಲು ಯಶಸ್ವಿಯಾದ ಪೊಲೀಸರು ಮೃತ ದೇಹಗಳನ್ನು ರಾವನಗರ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ.
ಸ್ಥಳಕ್ಕೆ ಸ್ಥಳಕ್ಕೆ ಪ್ರಭಾರ ಎಸ್ಪಿ ಜಾಹ್ನವಿ ಅವರು ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್ ಬಿಗಿ ಬಂದೋಬಸ್ತ್ ನೀಡಿದ್ದಾರೆ.