ಹೈದರಾಬಾದ್: ಮದುವೆಯ ನಂತರ ಪದವಿ ವಿದ್ಯಾರ್ಥಿಯನ್ನು ಪ್ರೀತಿಸಿದ ವ್ಯಕ್ತಿಯೊಬ್ಬ ವಿವಾಹೇತರ ಸಂಬಂಧದ ಕಾರಣ ಒಟ್ಟಿಗೆ ಬದುಕಲು ಸಾಧ್ಯವಿಲ್ಲ ಎಂದು ಅರಿತು ಆಕೆಯೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ವಜ್ರಪುಕೊತ್ತೂರು ಪ್ರದೇಶದಲ್ಲಿ ನಡೆದಿದೆ.
ಅಪ್ಪಲ್ರಾಜು ಮತ್ತು ಪದ್ಮ ಆತ್ಮಹತ್ಯೆ ಮಾಡಿಕೊಂಡವರು. ಅಪ್ಪಲ್ರಾಜು 2015 ರಲ್ಲಿ ತನ್ನ ಅಕ್ಕನ ಮಗಳನ್ನು ಮದುವೆಯಾಗಿದ್ದ. ದಂಪತಿಗೆ ಗಂಡು ಮಗು ಜನಿಸಿತ್ತು.
ಅಪ್ಪಲ್ರಾಜು ಇಟ್ಟಿಗೆ ಕಾರ್ಖಾನೆಯಲ್ಲಿ ದಿನಗೂಲಿ ನೌಕರನಾಗಿದ್ದು, ಮದುವೆ ನಂತರ ಕಳೆದ ಎರಡು ವರ್ಷಗಳಿಂದ ಪದ್ಮ ಎಂಬಾಕೆಯನ್ನು ಪ್ರೀತಿಸಿ ಆಕೆಯೊಂದಿಗೆ ಸುತ್ತಾಟ ನಡೆಸಿದ್ದ. ಈ ಕುರಿತು ಪದ್ಮ ಮನೆಯಲ್ಲಿ ವಿಚಾರ ತಿಳಿದು ಇಬ್ಬರಿಗೂ ಎಚ್ಚರಿಕೆಯನ್ನು ನೀಡಲಾಗಿತ್ತು. ಆದರೆ ಗುರುವಾರ ಬೆಳಗ್ಗೆ ಮನೆಯಿಂದ ಹೊರಬಂದ ಇಬ್ಬರು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿ ಶ್ರೀಕಾಕುಳಂ ನ ರೈಲ್ವೇ ಟ್ರ್ಯಾಕ್ಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶುಕ್ರವಾರ ಬೆಳಗ್ಗೆ ರೈಲ್ವೆ ಟ್ರ್ಯಾಕ್ ಮೇಲೆ ಮೃತದೇಹಗಳನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ದೊರೆತ ಪದ್ಮ ಕಾಲೇಜು ಪುಸ್ತಕಗಳನ್ನ ಆಧರಿಸಿ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.