ನವದೆಹಲಿ: ಭ್ರಷ್ಟಾಚಾರದ(Corruption) ಆರೋಪದ ಮೇಲೆ ಆಮ್ ಆದ್ಮಿ ಪಾರ್ಟಿಯ(AAP) ಶಾಸಕ ಅಮಾನತುಲ್ಲಾ ಖಾನ್(Amanatullah Khan) ಅವರನ್ನು ದೆಹಲಿ ಪೊಲೀಸ್ ಘಟಕದ ಭ್ರಷ್ಟಾಚಾರ ನಿಗ್ರಹ ದಳ ಶುಕ್ರವಾರ ಬಂಧಿಸಿದೆ.
ದೆಹಲಿಯ ವಕ್ಫ್ ಬೋರ್ಡ್ ನೇಮಕಾತಿಯಲ್ಲಿ ಅಕ್ರಮ ನಡೆಸಿರುವ ಆರೋಪದ ಮೇಲೆ ಅಮಾನತುಲ್ಲಾ ಖಾನ್ ಅವರ ಮನೆ ಹಾಗೂ ಇತರ ಸ್ಥಳಗಳಲ್ಲಿ ಇಂದು ದೆಹಲಿಯ ಭ್ರಷ್ಟಾಚಾರ ನಿಗ್ರಹ ದಳ ಶೋಧ ನಡೆಸಿತ್ತು. ದಾಳಿ ವೇಳೆ 12 ಲಕ್ಷ ರೂ. ಹಾಗೂ ಪರವಾನಗಿ ಇಲ್ಲದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದೆ. ಇದನ್ನೂ ಓದಿ: ಇದು ಯುದ್ಧದ ಸಮಯವಲ್ಲ – ಪುಟಿನ್ಗೆ ಪ್ರಧಾನಿ ಮೋದಿ ಸಲಹೆ
ದೆಹಲಿ ವಕ್ಫ್ ಬೋರ್ಡ್ ನೇಮಕಾತಿಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಎಸಿಬಿ ತನಿಖೆ ನಡೆಸುತ್ತಿದೆ. 2 ವರ್ಷಗಳ ಹಿಂದಿನ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಿಗ್ರಹ ದಳ ಅಮಾನತುಲ್ಲಾ ಖಾನ್ ಅವರನ್ನು ಪ್ರಶ್ನಿಸಿದೆ. 2020ರ ಭ್ರಷ್ಟಾಚಾರ ತಡೆ ಕಾಯ್ದೆಯಡಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಓಖ್ಲಾದ ಶಾಸಕರನ್ನು ಮಧ್ಯಾಹ್ನ 12 ಗಂಟೆಗೆ ವಿಚಾರಣೆಗೆ ಕರೆಯಲಾಗಿತ್ತು. ಇದನ್ನೂ ಓದಿ: ವಿಮಾನದಲ್ಲಿ ಭಾರತಕ್ಕೆ ಬರುತ್ತಿದೆ 8 ಚೀತಾ – ವಿಶೇಷತೆ ಏನು? ತಯಾರಿ ಹೇಗೆ?
ಅಮಾನತುಲ್ಲಾ ಖಾನ್ ಅವರ ನಿವಾಸದಲ್ಲಿ ಸಹಾಯಕ ಪೊಲೀಸ್ ಕಮಿಷನರ್ (ಎಸಿಪಿ) ಒಳಗೊಂಡ ಶೋಧ ತಂಡವು ದಾಳಿ ನಡೆಸಿತ್ತು. ಶೋಧದ ವೇಳೆ ನಿವಾಸದ ಹೊರಗೆ ಜಮಾಯಿಸಿದ ಜನರು ತಮ್ಮ ಕೆಲಸಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.