ಬೆಂಗಳೂರು: ಕೊರೊನಾ ವೈರಸ್ ಜಗತ್ತಿನಾದ್ಯಂತ ಜನರ ನಿದ್ದೆಗೆಡಿಸಿದೆ. ದಿನೇ ದಿನೇ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗತ್ತಲೇ ಇದೆ. ಈ ವೈರಸ್ ಬಡವರು, ನಿರ್ಗತಿಕರು, ಕೂಲಿ ಕಾರ್ಮಿಕರು ಸೇರಿದಂತೆ ಸಾವಿರಾರು ಜನರ ಜೀವನದ ಮೇಲೆ ಪರಿಣಾಮ ಬೀರಿದೆ. ಇದೀಗ ಸಪ್ತಪದಿ ತುಳಿಯಬೇಕಿದ್ದ ಅದೆಷ್ಟೂ ನವ ಜೋಡಿಗಳಿಗೆ ಮುಳ್ಳಾಗಿ ಪರಿಣಮಿಸಿದೆ.
ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಕಳೆದ ಹದಿನಾಲ್ಕು ದಿನಗಳಿಂದ ಲಾಕ್ಡೌನ್ ಮಾಡಲಾಗಿದ್ದು, ಅದರ ಎಫೆಕ್ಟ್ ನೇರವಾಗಿ ಶುಭಾಸಮಾರಂಭಗಳ ಮೇಲೆ ಬಿದ್ದಿದೆ. ಮಾರ್ಚ್ ಮತ್ತು ಏಪ್ರಿಲ್ ತಿಂಗಳು ಚೈತ್ರ ವೈಶಾಖ ದಿನಗಳಾಗಿದ್ದು, ವಿಶೇಷವಾಗಿ ಮದುವೆ ಸಮಾರಂಭಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿದ್ದವು.
ಬೆಂಗಳೂರು ಒಂದರಲ್ಲೇ ನಡೆಯಬೇಕಿದ್ದ ಸುಮಾರು 3 ಸಾವಿರಕ್ಕೂ ಹೆಚ್ಚು ಮದುವೆಗಳು ನಿಂತಿವೆ ಎಂದು ಅಂದಾಜಿಸಲಾಗಿದೆ. ಹೆಣ್ಣು- ಗಂಡಿನ ಮನೆ ಕಡೆಯವರು ನಿಶ್ಚಿತಾರ್ಥ ಮಾಡಿಕೊಂಡು ಮದುವೆಗೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಇನ್ನೂ ಕೆಲವರು ಮೂರು ತಿಂಗಳ ಹಿಂದೆಯೇ ಕಲ್ಯಾಣ ಮಂಟಪಗಳನ್ನು ಬುಕ್ ಮಾಡಿಕೊಂಡು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಲಾಕ್ಡೌನ್ ಆದ ಕಾರಣ ಎಲ್ಲವೂ ಕ್ಯಾನ್ಸಲ್ ಆಗಿದೆ.
ಮೂರು ಸಾವಿರದಷ್ಟು ಮದುವೆಗಳು ನಿಂತಿದ್ರೆ, ಗೃಹ ಪ್ರವೇಶಗಳು, ನಾಮಕರಣಗಳು, ಇನ್ನಿತರೇ ಶುಭಾಸಮಾರಂಭಗಳು ಸೇರಿದಂತೆ ಸುಮಾರು 5 ಸಾವಿರಕ್ಕೂ ಸಮಾರಂಭಗಳಿಗೆ ಬ್ರೇಕ್ ಬಿದ್ದಿದೆ ಎಂದು ಮದುವೆ ಪುರೋಹಿತ ನಾಗರಾಜ್ ಶರ್ಮಾ ತಿಳಿಸಿದ್ದಾರೆ.
ಲಾಕ್ಡೌನ್ ಹಿನ್ನೆಲೆಯಲ್ಲಿ ಶುಭಾಸಮಾರಂಭಗಳು ನಿಂತಿದೆ. ಆದರೆ ಇದನ್ನೇ ನಂಬಿ ಬದುಕುತ್ತಿದ್ದ ಪುರೋಹಿತ ವರ್ಗದ ಮೇಲೆ ಪರಿಣಾಮ ಬಿದ್ದಿದ್ದು, ಆರ್ಥಿಕವಾಗಿ ಅವರು ಕೂಡ ಸಂಕಷ್ಟದಲ್ಲಿದ್ದಾರೆ.