ಬೆಂಗಳೂರು: ಈಗ ನಾವೆಲ್ಲರೂ ಮನೆಯಲ್ಲಿರುವ ಸಮಯ, ನಾವೆಲ್ಲಾ ನಿಮಗಾಗಿ ಬೀದಿಯಲ್ಲಿದ್ದೇವೆ. ಆದರೆ ನೀವು ಮನೆಯಲ್ಲಿದ್ದರೆ ಸಾಕು ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ.ಡಿ. ಚನ್ನಣ್ಣನವರ್ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಕೊರೊನಾ ವೈರಸ್ ಭೀತಿಯಿಂದ 144 ಜಾರಿ ಹಿನ್ನೆಲೆಯಲ್ಲಿ ದೇಶದಾದ್ಯಂತ ಲಾಕ್ಡೌನ್ ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ.ಡಿ. ಚನ್ನಣ್ಣನವರ್ ನೆಲಮಂಗಲಕ್ಕೆ ಭೇಟಿ ನೀಡಿದ್ದರು. ಈ ವೇಳೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಪೊಲೀಸರ ಕಾರ್ಯ ನಿಯೋಜನೆ ತಪಾಸಣೆ ನಡೆಸಿದ್ದಾರೆ. ನಂತರ ಪೊಲೀಸ್ ಅಧಿಕಾಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇದೇ ವೇಳೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರವಿ ಚನ್ನಣ್ಣವರ್, ಇಡೀ ಜಿಲ್ಲಾದ್ಯಂತ 144 ಸೆಕ್ಸನ್ ಜಾರಿಯಾಗಿದೆ. ತುರ್ತು ಸೇವೆಗಳನ್ನು ಹೊರತು ಪಡಿಸಿ, ಸರಕು-ಸಾಗಾಣಿಕೆಗಳನ್ನು ಹೊರತು ಪಡಿಸಿ, ಎಲ್ಲವನ್ನು ಬಂದ್ ಮಾಡಿದ್ದೀವಿ. ಜನರು ಕೂಡ ಸಹಕರಿಸುತ್ತಿದ್ದಾರೆ. ಈಗ ನಾವೆಲ್ಲರೂ ಮನೆಯಲ್ಲಿರುವ ಸಮಯ, ನಾವೆಲ್ಲಾ ನಿಮಗಾಗಿ ಬೀದಿಯಲ್ಲಿದ್ದೇವೆ. ಆದರೆ ನೀವು ಮನೆಯಲ್ಲಿದ್ದರೆ ಸಾಕು, ಆ ಮೂಲಕ ನಮಗೆ ಸಹಕರಿಸಿ ಎಂದು ಮನವಿ ಮಾಡಿಕೊಂಡರು.
ನನಗೆ ಏನು ಆಗಲ್ಲ ಎಂಬ ಅತೀಯಾದ ಆತ್ಮವಿಶ್ವಾಸ, ಯಾರಿಗೋ ಬಂದಿದೆ, ನಮಗೆ ಬರಲ್ಲ ಎಂಬುದು ಬೇಡ. ನಾವು ಕೊಡುತ್ತಿರುವ ಪ್ರತಿ ಸೂಚನೆ ನಿಮ್ಮ ಒಳಿತಿಗಾಗಿ. ಅದನ್ನು ನೀವು ಪಾಲನೆ ಮಾಡಬೇಕು. ಇದನ್ನು ಮೀರಿ ಮನೆಯಿಂದ ಹೊರ ಬಂದರೆ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು. ನಮ್ಮ ಸಿಬ್ಬಂದಿಯ ಸುರಕ್ಷತೆ ನಮಗೆ ಮೊದಲ ಆದ್ಯತೆ. ಹೀಗಾಗಿ ನಾನು ಅವರಿಗಾಗಿ ಮಾಸ್ಕ್ ನೀಡಿದ್ದೇವೆ ಎಂದರು.
ಕೆಲಸದ ವೇಳೆ ಪುಂಡ ಪೋಕರಿಗಳ ವಿರುದ್ಧ ಯಾವುದೇ ಭಯಬೇಡ, ಲಾಟಿ ಹಿಡಿದು ಕೆಲಸ ನಿರ್ವಹಿಸಿ ಎಂದಿದ್ದಾರೆ. ಸಿಬ್ಬಂದಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಹೋಂ ಡೆಲಿವರಿ ಅವರಿಗೆ ಅವಕಾಶ ಮಾಡಿಕೊಡಿ, ಯಾಕೆಂದರೆ ಜನರಿಗೆ ತೊಂದರೆ ಆಗಬಾರದು. ಪ್ರತಿಯೊಬ್ಬರನ್ನು ತಪಾಸಣೆ ಮಾಡಿ ಎಂದು ಸೂಚನೆ ಕೊಟ್ಟರು. ಜೊತೆಗೆ ಪೊಲೀಸ್ ಸಿಬ್ಬಂದಿಗೆ ಕೊರೊನಾ ವೈರಸ್ ಬಗ್ಗೆ ಮಾಹಿತಿ ಜಾಗೃತಿ ಮೂಡಿಸಿದರು.