– ವಾರಾಂತ್ಯದಲ್ಲಿ 10 ಸಾವಿರ, ಇಂದು 100 ಜನರೂ ಇಲ್ಲ
ಉಡುಪಿ: ಕೊರೊನಾ ವೈರಸ್ಗೆ ಕರ್ನಾಟಕದ ಪ್ರವಾಸಿಗರು ಬೆಚ್ಚಿ ಬಿದ್ದಿದ್ದಾರೆ. ವೀಕೆಂಡ್ ಬಂದರೆ ಸಾಕು ಉಡುಪಿಯ ಮಲ್ಪೆ ಬೀಚಲ್ಲಿ 10-20 ಸಾವಿರ ಪ್ರವಾಸಿಗರು ತುಂಬಿಕೊಳ್ಳುತ್ತಿದ್ದರು. ಆದರೆ ಇಂದು ಬೆರಳಣಿಕೆ ಪ್ರವಾಸಿಗರಿದ್ದಾರೆ.
ಹೊರ ಜಿಲ್ಲೆಗಳಿಂದ ಪ್ರವಾಸಿಗರು ಮಲ್ಪೆಗೆ ಬರಲು ಹಿಂದೇಟು ಹಾಕಿದ್ದಾರೆ. ರಾಜ್ಯಾದ್ಯಂತ ಸಿಎಂ ಒಂದು ವಾರ ಹೈ ಅಲರ್ಟ್ ಘೋಷಣೆ ಮಾಡಿದ್ದಾರೆ. ಜೊತೆಗೆ ಉಡುಪಿಯ ಮಣಿಪಾಲದಲ್ಲಿ ಶಂಕಿತ ಕೊರೊನಾ ಪ್ರಕರಣ ಪತ್ತೆಯಾಗಿರುವ ಕಾರಣ ಬೀಚ್ ಕಡೆ ಜನ ಬರುತ್ತಿಲ್ಲ. ಕೊರೊನಾದಿಂದ ಭಾರತದ ಸೇಫೆಸ್ಟ್ ಬೀಚ್ ಬಿಕೋ ಅಂತಿದೆ.
ಮಲ್ಪೆ ಲೈಫ್ ಗಾರ್ಡ್ ಅಚ್ಯುತ್ ಸುವರ್ಣ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ವಾರಾಂತ್ಯದಲ್ಲಿ ಕನಿಷ್ಠ 10 ಸಾವಿರ ಜನ ಬರುತ್ತಾರೆ. ಆದರೆ ಇವತ್ತು ನೂರು ಜನರೂ ಬರಲಿಲ್ಲ. ಹೊರಗಿನ ಪ್ರವಾಸಿಗರು ಇಲ್ಲ. ನಮ್ಮ ಊರಿನವರೂ ಬರುತ್ತಿಲ್ಲ. ಕೊರೊನಾ ಉಂಟಾ ಇಲ್ವಾ ಗೊತ್ತಿಲ್ಲ. ಆದರೆ ಜನರಲ್ಲಿ ಭಯ ಇದೆ ಎಂದರು.
ಬೋಟ್ ಸಿಬ್ಬಂದಿ ಸೀತಾರಾಮ ಕುಮಾರ್ ತನ್ನ ವ್ಯಾಪಾರ ಇಲ್ಲದ ದಿನದ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಇವತ್ತು ಒಂದು ಬೋಟಿಂಗ್ಗೂ ವ್ಯಾಪಾರ ಆಗಿಲ್ಲ. ಪ್ರವಾಸಿಗರು ಬೋಟಿಂಗ್ ಕಡೆ ಬರುತ್ತಲೇ ಇಲ್ಲ ಎಂದರು. ಇನ್ನೂ ವ್ಯಾಪಾರ ಇಲ್ಲದೆ ಅಂಗಡಿ ಮುಂಗಟ್ಟುಗಳು ಖಾಲಿಯಾಗಿದ್ದವು.