ಬೆಂಗಳೂರು: ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಕೆಲವು ಮುಂಜಾಗೃತಾ ಕ್ರಮವನ್ನು ತೆಗೆದುಕೊಂಡಿದ್ದು, ಒಂದು ವಾರ ಕಾಲ ಅದ್ಧೂರಿ ಮದುವೆಗೆ ಬ್ರೇಕ್ ಹಾಕಿದೆ.
ಸರ್ಕಾರ ಅದ್ಧೂರಿ ಮದುವೆಯನ್ನು ನಿರ್ಬಂಧಿಸಿದ್ದರೂ ಸರಳವಾಗಿ ಕಾರ್ಯಕ್ರಮ ನಡೆಸಬಹುದು. ಈಗಾಗಲೇ ನಿಗದಿಯಾಗಿರುವ ಗರಿಷ್ಟ 100 ಮಂದಿ ಮಾತ್ರ ಪಾಲ್ಗೊಳ್ಳುವ ಮದುವೆ ಸಮಾರಂಭಕ್ಕೆ ಸರ್ಕಾರ ಅನುಮತಿ ನೀಡಿದೆ.
ಯಾವುದು ಇರಲ್ಲ?
ಮಾಲ್, ಸಿನಿಮಾ ಥಿಯೇಟರ್ ಬಂದ್ ಆಗಲಿದ್ದು, ನೈಟ್ ಕ್ಲಬ್, ಪಬ್ ತೆರೆಯಲು ಅನುಮತಿ ನೀಡಿಲ್ಲ. ಅದ್ಧೂರಿ ಮದುವೆ, ಹುಟ್ಟುಹಬ್ಬ, ನಾಮಕರಣ ಬಂದ್ ಆಗಲಿದ್ದು ಸಭೆ-ಸಮಾರಂಭಗಳಿಗೆ ಬ್ರೇಕ್ ಬೀಳಲಿದೆ.
ಉದ್ಯಾನವನ, ಸ್ವಿಮ್ಮಿಂಗ್ ಪೂಲ್ ಬಂದ್ ಆಗಲಿದ್ದು, ಯಾರೂ ಸಮ್ಮರ್ ಕ್ಯಾಂಪ್ ಮಾಡದಂತೆ ಸೂಚಿಸಲಾಗಿದೆ. ಶಾಲಾ, ಕಾಲೇಜ್, ಎಲ್ಲಾ ವಿವಿಗಳು ಬಂದ್ ಆಗಲಿದೆ. ಆದರೆ ಪಿಯುಸಿ ಸೇರಿದಂತೆ ಈಗಾಗಲೇ ನಿಗದಿಯಾದ ಪರೀಕ್ಷೆಗಳು ಎಂದಿನಂತೆ ನಡೆಯಲಿದೆ. ಅಧಿವೇಶನ ಮತ್ತು ಸರ್ಕಾರಿ ಕಚೇರಿಗಳು ಎಂದಿನಂತೆ ನಡೆಯಲಿದ್ದು, ಜಾತ್ರೆಗಳು ಮತ್ತು ಕ್ರೀಡಾ ಚಟುವಟಿಕೆ ಮಾಡದಂತೆ ಸೂಚಿಸಲಾಗಿದೆ.
15 ದಿನ ರಜೆ: ಕೊರೊನಾ ಸಾಂಕ್ರಾಮಿಕ ರೋಗ ಎಂಬುದಾಗಿ ಸರ್ಕಾರ ಘೋಷಿಸಿದ್ದು 15 ದಿನಗಳ ಕಾಲ ಎಲ್ಲ ಸರ್ಕಾರಿ, ಖಾಸಗಿ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದೆ.
ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಇಂದು ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ತುರ್ತು ಸಭೆ ನಡೆಯಿತು. ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ, ಇಂದು ತೆಗೆದುಕೊಂಡ ನಿರ್ಧಾರ ಇಡಿ ರಾಜ್ಯಕ್ಕೆ ಅನ್ವಯವಾಗಲಿದೆ. ಸಾರ್ವಜನಿಕ ಹಿತ ದೃಷ್ಟಿಯಿಂದ ಈ ತೀರ್ಮಾನವನ್ನು ಕೈಗೊಂಡಿದ್ದೇವೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಶ್ರೀ @BSYBJP ಅವರು, ಕರೊನಾ ವೈರಸ್ ಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ಸಭೆ ನಡೆಸಿದರು.
ಉಪ ಮುಖ್ಯಮಂತ್ರಿಗಳಾದ @GovindKarjol, @drashwathcn, ಸಚಿವರಾದ @sriramulubjp , @nimmasuresh, @mla_sudhakar, ಡಾ. ದೇವಿಶೆಟ್ಟಿ, ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯಭಾಸ್ಕರ್, ಸಿಎಂ ಅವರ ಸಲಹೆಗಾರ ಎಂ ಲಕ್ಷ್ಮೀನಾರಾಯಣ್ ಇದ್ದರು pic.twitter.com/f8amYTwIrb
— CM of Karnataka (@CMofKarnataka) March 13, 2020
ಸಾಧ್ಯವಾದಷ್ಟು ಕಂಪನಿಗಳು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಆದೇಶ ನೀಡಬೇಕು. ಈಗಾಗಲೇ ನಿಗದಿಯಾಗಿದ್ದ ಪ್ರವಾಸವನ್ನು ಜನರು ರದ್ದು ಮಾಡಬೇಕು ಎಂದು ಸಿಎಂ ಕೇಳಿಕೊಂಡರು.