– ಶೀಘ್ರದಲ್ಲೇ ನಡೆಯಲಿದೆ ಮುಂದೂಡಲ್ಪಟ್ಟ ವಿವಾಹ
ಮಂಗಳೂರು: ಕೊರೊನಾ ವೈರಸ್ ಎಫೆಕ್ಟ್ನಿಂದ ಸಮುದ್ರ ಮಧ್ಯೆ ದಿಗ್ಬಂಧನಕ್ಕೊಳಗಾಗಿದ್ದ ಹಡಗನ್ನು ಹಾಂಗ್ ಕಾಂಗ್ ಸರ್ಕಾರ ಇಂದು ಬಿಡುಗಡೆಗೊಳಿಸಿದೆ. ಹೀಗಾಗಿ ಆ ಹಡಗಿನಲ್ಲಿದ್ದ ಸಿಬ್ಬಂದಿ ಮಂಗಳೂರಿನ ಕುಂಪಲ ನಿವಾಸಿಗೆ ಇಂದು ಮದುವೆಯಾಗಬೇಕಿತ್ತು. ಇದೀಗ ಮುಂದೂಡಲ್ಪಟ್ಟ ವಿವಾಹ ಶೀಘ್ರದಲ್ಲೇ ನಡೆಯಲಿದೆ.
ಸಿಂಗಾಪುರ ಮೂಲದ ಸ್ಟಾರ್ ಕ್ರೂಝ್ನಲ್ಲಿ ಮಂಗಳೂರಿನ ಕುಂಪನ ನಿವಾಸಿ ಗೌರವ್ ಕಳೆದ ಕೆಲ ವರ್ಷದಿಂದ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಫೆಬ್ರವರಿ 10 ಅಂದರೆ ಇಂದು ಮಂಗಳೂರಿನಲ್ಲಿ ಗೌರವ್ಗೆ ಮದುವೆ ನಡೆಯಬೇಕಿತ್ತು. ಆದರೆ ಕೊರೊನಾ ವೈರಸ್ನ ಹಿನ್ನೆಲೆಯಲ್ಲಿ ಗೌರವ್ ಇದ್ದ ಸ್ಟಾರ್ ಕ್ರೂಝ್ನ್ನು ಹಾಂಗ್ ಕಾಂಗ್ ಸಮುದ್ರ ಮಧ್ಯೆ ಅಲ್ಲಿನ ಸರ್ಕಾರ ತಡೆದು ನಿಲ್ಲಿಸಿತ್ತು. ಇದನ್ನೂ ಓದಿ: ಮದುವೆಗೂ ತಟ್ಟಿದ ಕೊರೊನಾ ವೈರಸ್
ಕಳೆದ ಎಂಟು ದಿನದಿಂದ ಸಮುದ್ರ ಮಧ್ಯೆಯಲ್ಲೇ 1,700 ಪ್ರವಾಸಿಗರು ಸೇರಿ ಸಿಬ್ಬಂದಿ ದಿಗ್ಭಂದನಕ್ಕೊಳಗಾಗಿದ್ದರು. ಹಾಂಗ್ ಕಾಂಗ್, ಸಿಂಗಪುರ, ಥೈವಾನ್ ನಡುವೆ ಸಂಚರಿಸುವ ಕ್ರೂಝ್ ಆಗಿರುವುದರಿಂದ ಅದರಲ್ಲಿದ್ದ ಎಲ್ಲರನ್ನೂ ಕೊರೊನಾ ವೈರಸ್ ಇರುವ ಶಂಕೆಯಿಂದ ತಪಾಸಣೆ ನಡೆಸಲಾಗಿತ್ತು. ಹೀಗಾಗಿ ಇಂದು ನಿಗದಿಯಾಗಿದ್ದ ಗೌರವ್ ಅವರ ಮದುವೆಯನ್ನು ಅವರು ಬರದೇ ಇರುವ ಕಾರಣಕ್ಕೆ ಮುಂದೂಡಲಾಗಿತ್ತು.
ಇಂದು ಹಡಗಿನಲ್ಲಿದ್ದ ಎಲ್ಲರ ವರದಿಯಲ್ಲೂ ನೆಗೆಟಿವ್ ಬಂದಿರುವುದರಿಂದ ಹಗಡನ್ನು ಬಿಡುಗಡೆಗೊಳಿಸಲಾಗಿದೆ. ಹೀಗಾಗಿ ಕ್ರೂಝ್ನಲ್ಲಿದ್ದ ಎಲ್ಲರೂ ನಿಟ್ಟುಸಿರು ಬಿಟ್ಟಿದ್ದು, ಗೌರವ್ ಅವರು ಶೀಘ್ರದಲ್ಲೇ ಊರಿಗೆ ಬರಲಿದ್ದಾರೆ. ಹೀಗಾಗಿ ಮುಂದೂಡಲ್ಪಟ್ಟ ಮದುವೆ ಶೀಘ್ರದಲ್ಲೇ ನಡೆಸಲು ಕುಟುಂಬದವರು ತೀರ್ಮಾನಿಸಿದ್ದಾರೆ.