ದೆಹಲಿ ಹಿಂಸಾಚಾರವನ್ನ ಮುಚ್ಚಿಹಾಕಲು ಕೊರೊನಾ ವೈರಸ್ ಭೀತಿ ಸೃಷ್ಟಿ: ದೀದಿ

Public TV
2 Min Read
Mamata banerjee

ಕೋಲ್ಕತ್ತಾ: ದೇಶದಲ್ಲಿ ಕೊರೊನಾ ವೈರಸ್ ಭಾರೀ ತಲ್ಲಣ ಉಂಟು ಮಾಡಿದೆ. ಆದರೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕೊರೊನಾ ವೈರಸ್ ಭೀತಿಯು ಇತ್ತೀಚಿನ ದೆಹಲಿ ಹಿಂಸಾಚಾರದಿಂದ ಜನರ ಗಮನವನ್ನು ಬೇರೆಡೆ ಸೆಳೆಯುವ ತಂತ್ರವಾಗಿದೆ ಎಂದು ಆರೋಪಿಸಿದ್ದಾರೆ.

ಕೋಲ್ಕತ್ತಾದಲ್ಲಿ ಬುಧವಾರ ಮಾತನಾಡಿದ ಅವರು, ‘ಜನರು ಕೊರೊನಾ, ಕೊರೊನಾ ಎಂದು ಕಿರುಚುತ್ತಿದ್ದಾರೆ. ಇದಕ್ಕೆಲ್ಲ ಭಯಪಡಬೇಡಿ. ಕೆಲವು ಚಾನೆಲ್‍ಗಳು ದೆಹಲಿ ಹಿಂಸಾಚಾರವನ್ನು ಕರೋನವೈರಸ್ ಭೀತಿಯಿಂದ ಮುಚ್ಚಿಡಲು ಪ್ರಯತ್ನಿಸುತ್ತಿವೆ. ಇದು ಒಂದು ರೋಗವಷ್ಟೇ ಜನರು ಭಯಭೀತರಾಗಬಾರದು. ದೆಹಲಿ ಹಿಂಸಾಚಾರದಲ್ಲಿ ಜನರು ಕೊಲ್ಲಲ್ಪಟ್ಟಿದ್ದು, ಕೊರೊನಾ ವೈರಸ್ ಕಾರಣದಿಂದಲ್ಲ ಬಿಜೆಪಿಯಿಂದ ಕೊಲೆಯಾಗಿದ್ದಾರೆ ಎಂದು ದೂರಿದರು.

Coronavirus 6

ಬಿಜೆಪಿ ವಿರುದ್ಧ ಗುಡುಗು:
ದೆಹಲಿ ಹಿಂಸಾಚಾರವು ‘ರಾಜ್ಯ ಪ್ರಾಯೋಜಿತ ಯೋಜಿತ ನರಮೇಧ’ ಎಂದು ಪಶ್ಚಿಮ ಬಂಗಾಳ ಸಿಎಂ ಮಂಗಳವಾರ ಬಿಜೆಪಿಯ ವಿರುದ್ಧ ತೀವ್ರ ದಾಳಿ ನಡೆಸಿದ್ದರು. ಕೋಲ್ಕತ್ತಾದಲ್ಲಿ ನಡೆದ ಟಿಎಂಸಿ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶಾದ್ಯಂತ ‘ಗುಜರಾತ್ ಮಾದರಿಯ ಗಲಭೆ’ಯನ್ನು ಪುನರಾವರ್ತಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದರು.

‘ದೆಹಲಿಯಲ್ಲಿ ಮುಗ್ಧ ಜನರನ್ನು ಹತ್ಯೆಗೈದಿದ್ದು ನನಗೆ ತುಂಬಾ ನೋವು ತಂದಿದೆ. ಇದು ಯೋಜಿತ ನರಮೇಧ ಎಂದು ನಾನು ಭಾವಿಸುತ್ತೇನೆ. ದೆಹಲಿ ಪೊಲೀಸರು ಕೇಂದ್ರದ ಅಡಿಯಲ್ಲಿದ್ದಾರೆ. ದೆಹಲಿ ಪೊಲೀಸರು, ಸಿಆರ್‍ಪಿಎಫ್, ಸಿಐಎಸ್‍ಎಫ್ ಯಾರೂ ಗಲಭೆಯನ್ನು ನಿಯಂತ್ರಿಸಲಿಲ್ಲ’ ಎಂದು ಆರೋಪಿಸಿದ್ದರು.

DHL Violence

ಕೊರೊನಾ ವೈರಸ್:
ಚೀನಾದ ವೂಹಾನ್‍ನಲ್ಲಿ ಮೊದಲು ಕಾಣಿಸಿಕೊಂಡ ಮಾರಣಾಂತಿಕ ವೈರಸ್ ಇದುವರೆಗೆ 80ಕ್ಕೂ ಹೆಚ್ಚು ದೇಶಗಳಿಗೆ ಹರಡಿದೆ. ಕೊರೊನಾ ವೈರಸ್‍ಗೆ 3,000ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಪ್ರಪಂಚದಾದ್ಯಂತ 93,000ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ ಎಂದು ವರದಿಯಾಗಿದೆ.

ಬುಧವಾರ ಬೆಳಗ್ಗೆಯವರೆಗೆ ಭಾರತದಲ್ಲಿ 438 ಮಂದಿ ಕೊರೊನಾ ಶಂಕಿತರೆಂದು ವರದಿಯಾಗಿದೆ. ಅದರಲ್ಲಿ 225 ಜನರ ಮೇಲೆ 28 ದಿನಗಳ ಕಾಲ ತೀವ್ರ ನಿಗಾ ವಹಿಸಲಾಗಿತ್ತು. 189 ಮಂದಿ ಮೇಲೆ ತೀವ್ರ ನಿಗಾ ವಹಿಸಲಾಗುತ್ತಿದೆ. 89 ಮಂದಿಯನ್ನು ಪ್ರತ್ಯೇಕ ಸ್ಥಳದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. 118 ಮಂದಿ ಕೊರೊನಾ ಪರೀಕ್ಷೆ ಮಾಡಿಸಿದ್ದು, 103 ಜನರ ವರದಿಯಲ್ಲಿ ನೆಗೆಟೀವ್ ಬಂದಿದ್ದು, 4 ಮಂದಿಯ ವರದಿಗಾಗಿ ಕಾಯುತ್ತಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

coronavirus 3

ಇಟಲಿಯಿಂದ ಬಂದ 21 ಮಂದಿಯನ್ನು ಪರೀಕ್ಷಿಸಲಾಗಿದ್ದು ಇದರಲ್ಲಿ 15 ಮಂದಿ ರಕ್ತದ ಮಾದರಿಯಲ್ಲಿ ಕೊರೊನಾ ಪಾಸಿಟಿವ್ ಅಂಶ ಕಂಡುಬಂದಿದೆ. ಇಟಲಿಯ ಪ್ರವಾಸಿಗರ ಗುಂಪಿನ ಸದಸ್ಯರನ್ನು ದೆಹಲಿಯ ಐಟಿಬಿಪಿ(ಇಂಡೋ ಟಿಬೆಟ್ ಬಾರ್ಡರ್ ಪೊಲೀಸ್) ಕೇಂದ್ರದಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜೈಪುರಕ್ಕೆ ಆಗಮಿಸಿದ ಇಟಲಿಯ ಪ್ರವಾಸಿಗನಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಆತನ ಪತ್ನಿಗೂ ಕೊರೊನಾ ವೈರಸ್‍ನ ಆರಂಭಿಕ ಲಕ್ಷಣಗಳು ಕಾಣಿಸಿಕೊಂಡಿತ್ತು. ಈ ದಂಪತಿ ರಾಜಸ್ಥಾನ ಪ್ರವಾಸ ಮಾಡುವ ಈ ಪ್ರವಾಸಿ ಗುಂಪಿನ ಭಾಗವಾಗಿದ್ದರು.

Share This Article
1 Comment

Leave a Reply

Your email address will not be published. Required fields are marked *