ಮಂಗಳೂರು: ಕೊರೊನಾ ಎಫೆಕ್ಟ್ ರಾಜ್ಯದ ಪ್ರಮುಖ ದೇವಸ್ಥಾನಗಳಿಗೆ ತಟ್ಟಿಲ್ಲ. ಕುಕ್ಕೆ ಸುಬ್ರಹ್ಮಣ್ಯ ಮತ್ತು ಧರ್ಮಸ್ಥಳದಲ್ಲಿ ಎಂದಿನಂತೆ ಭಕ್ತರ ದಟ್ಟಣೆ ಕಂಡುಬಂದಿದೆ.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರ ಸಂಖ್ಯೆ ಎಂದಿಗಿಂತ ಹೆಚ್ಚಿದ್ದು, ದೇವಸ್ಥಾನದ ರಥಬೀದಿ ಭಕ್ತರಿಂದ ತುಂಬಿ ಹೋಗಿದೆ. ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಉರಿ ಬಿಸಿಲಿನಲ್ಲಿಯೂ ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದಿದ್ದಾರೆ. ಕೊರೊನಾ ಹಿನ್ನೆಲೆ ರಜೆ ಸಿಕ್ಕ ಕಾರಣ ಭಕ್ತರು ತೀರ್ಥ ಕ್ಷೇತ್ರಗಳ ಪರ್ಯಟನೆ ಮಾಡುತ್ತಿದ್ದಾರೆ. ಇದನ್ನೂ ಓದಿ: ನಾವು ಇಟಲಿಗೆ ಹೋಗಿಲ್ಲ, ಪ್ಯಾರಿಸ್ ಪ್ರವಾಸ ರದ್ದು ಮಾಡಿದ್ದೇವೆ: ಚಂದನ್
ಮಂಗಳೂರಿನಲ್ಲಿ ಶಾಲಾ, ಕಾಲೇಜುಗಳು ಪೂರ್ತಿಯಾಗಿ ಬಂದ್ ಆಗಿವೆ. ಮಾಲ್, ರೆಸ್ಟೋರೆಂಟ್ ಕೂಡ ಸರ್ಕಾರದ ಆದೇಶದಂತೆ ಬಂದ್ ಆಗಿವೆ. ಬೆಳಗ್ಗೆ ಜಿಲ್ಲಾಡಳಿತದ ಸೂಚನೆ ಬಂದಿಲ್ಲವೆಂದು ಮಾಲ್ ಓಪನ್ ಮಾಡಲು ತಯಾರಿ ನಡೆದಿತ್ತು. ಬಳಿಕ ಎಚ್ಚೆತ್ತ ಜಿಲ್ಲಾಧಿಕಾರಿ ನೋಟೀಸ್ ಜಾರಿ ಮಾಡಿ ಬಂದ್ ಮಾಡಿಸಿದರು. ಇದನ್ನೂ ಓದಿ: ಇಟಲಿ, ಡೆನ್ಮಾರ್ಕ್ ಬಳಿಕ ಕುವೈತ್ ಸಂಪೂರ್ಣ ಬಂದ್
ಈ ನಡುವೆ ಸರ್ಕಾರ ಆದೇಶ ಇದ್ದರೂ ಬಂಟ್ವಾಳ ತಾಲೂಕಿನ ವಿಟ್ಲದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯೊಂದು ತೆರೆದಿದ್ದು ಕಂಡುಬಂತು. ಪೋಷಕರು ಮಕ್ಕಳನ್ನು ಶಾಲೆಗೆ ಕಳಿಸಿದ್ದರಿಂದ ಶಾಲೆ ನಡೆಸಬೇಕಾಯಿತು ಅಂತ ಶಿಕ್ಷಕರು ಸಮಜಾಯಿಷಿ ನೀಡಿದರು. ಮಾಧ್ಯಮದವರು ಶಾಲೆಗೆ ಬಂದಿದ್ದನ್ನು ನೋಡಿ, ಮಕ್ಕಳನ್ನು ಮನೆಗೆ ಕಳಿಸಿದ ಘಟನೆ ನಡೆಯಿತು.