– ನಮ್ಮ ಜಿಲ್ಲೆಯ ಕಾರ್ಮಿಕರಿಗಾಗಿ ಎಲ್ಲ ರೀತಿಯ ಸಹಾಯ ಮಾಡ್ತೇನೆ
– ರಾಜ್ಯದಲ್ಲಿ ಮದ್ಯಪಾನ ನಿಷೇಧಿಸಲು ಇದು ಸಕಾಲ
ಯಾದಗಿರಿ: ಬೇರೆ ರಾಜ್ಯದಿಂದ ಬಂದ ಜನರಿಗಾಗಿ ಸ್ವಂತ ಮನೆ ಬಿಟ್ಟುಕೊಡಲೂ ಸಿದ್ಧ ಎಂದು ಸುರಪುರ ಬಿಜೆಪಿ ಶಾಸಕ ರಾಜುಗೌಡ ಹೇಳಿದ್ದಾರೆ.
ಯಾದಗಿರಿ ಜಿ.ಪಂ. ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯ ಯಾದಗಿರಿ ಜಿಲ್ಲೆ ಗ್ರೀನ್ ಝೋನ್ ನಲ್ಲಿರುವ ಕಾರಣ ವಿವಿಧ ಜಿಲ್ಲೆಗಳಿಂದ ಮತ್ತು ರಾಜ್ಯಗಳಲ್ಲಿ ಸಿಲುಕಿರುವ ಜಿಲ್ಲೆಯ ಕಾರ್ಮಿಕರನ್ನು ಕರೆತರಲು ಸಿದ್ಧತೆ ನಡೆಸಾಲಗಿದೆ. ಆದರೆ ಇದಕ್ಕೆ ಜಿಲ್ಲೆಯ ಹಲವು ಜನ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೆ ನಮ್ಮ ಜಿಲ್ಲೆಯ ಕಾರ್ಮಿಕರಿಗೆ ನಾವು ಸಹಾಯ ಮಾಡಬೇಕಿದೆ ಎಂದು ಹೇಳಿದ್ದಾರೆ.
ಕೋವಿಡ್ 19 ಹರಡುವಿಕೆ ತಡೆಯಲು ಮುಂಜಾಗ್ರತಾ ಕ್ರಮವಾಗಿ, ಜಿಲ್ಲೆಗೆ ಬಂದಿರುವವರಿಗೆ ಸರ್ಕಾರಿ ಶಾಲೆ ಮತ್ತು ಹಾಸ್ಟೆಲ್ ಗಳಲ್ಲಿ ಕ್ವಾರಂಟೈನ್ ಮಾಡಲಾಗುತ್ತಿದೆ. ಇದಕ್ಕೆ ಸ್ಥಳೀಯರು ವಿರೋಧಿಸುತ್ತಿದ್ದಾರೆ. ಇದರಿಂದ ಭಾವುಕರಾದ ರಾಜೂಗೌಡ, ಕೊರೊನಾ ಯಾರ ಪಾಪದಿಂದ ಬಂದಿದ್ದಲ್ಲ, ಇದರ ವಿರುದ್ಧ ಎಲ್ಲರೂ ಹೋರಾಡಬೇಕು. ಜಿಲ್ಲಾಡಳಿತ ನನ್ನ ಮನೆ ಕೇಳಿದರೂ ನಾನು ಬಿಟ್ಟು ಕೊಡಲು ಸಿದ್ಧ ಎಂದಿದ್ದಾರೆ.
ಮದ್ಯಪಾನ ನಿಷೇಧಿಸುವಂತೆ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಯುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಮದ್ಯ ಮಾರಾಟ ನಿಷೇಧ ಮಾಡಲು ಇದು ಸೂಕ್ತ ಸಮಯ, ಲಾಕ್ ಡೌನ್ ಸಮಯದಲ್ಲಿ ಬಹಳಷ್ಟು ಕುಡುಕರು ಮದ್ಯ ವ್ಯಸನದಿಂದ ದೂರವಾಗಿದ್ದಾರೆ. ಇದನ್ನು ಅರಿತು ರಾಜ್ಯದಲ್ಲಿ ಮದ್ಯ ನಿಷೇಧ ಮಾಡಬೇಕು ಎಂದರು.