ಬೆಂಗಳೂರು: ದೇಶದೆಲ್ಲೆಡೆ ಕೊರೊನಾ ವೈರಸ್ ಜನರನ್ನು ಭಯಭೀತರನ್ನಾಗಿ ಮಾಡಿದೆ. ಈಗಾಗಲೇ ಜನರು ಮನೆಯಿಂದ ಹೊರಗಡೆ ಬರಲು ಭಯಪಡುತ್ತಿದ್ದಾರೆ. ಹೀಗಾಗಿ ಒಂದು ವಾರಗಳ ಕಾಲ ಸಿನಿಮಾ ಥಿಯೇಟರ್ ಮತ್ತು ಮಾಲ್ಗಳನ್ನು ಮುಚ್ಚುವಂತೆ ಸರ್ಕಾರ ಆದೇಶ ಹೊರಡಿಸಿದೆ. ಇದರ ಬೆನ್ನಲ್ಲೆ ಇದೀಗ ಕಿರುತೆರೆಯ ಲೋಕದಲ್ಲೂ ಕೊರೊನಾ ಭೀತಿ ಎದುರಾಗಿದೆ.
ಸಿನಿಮಾ, ಧಾರಾವಾಹಿ ಮತ್ತು ಡಾಕ್ಯುಮೆಂಟರಿ ಚಿತ್ರೀಕರಣಕ್ಕೆ ಬ್ರೇಕ್ ಹಾಕುವ ತೀರ್ಮಾನಕ್ಕೆ ಟೆಲಿವಿಷನ್ ಅಸೋಷಿಯೇಷನ್ ಮತ್ತು ಸಾಕಷ್ಟು ಸಂಘಗಳು ಭಾನುವಾರ ಒಟ್ಟಿಗೆ ಸಭೆ ನಡೆಸಿ ತೀರ್ಮಾನಕ್ಕೆ ಬಂದಿದೆ.
ಈ ಬಗ್ಗೆ ನಿರ್ಮಾಪಕರಿಗೆ ಮೂರು ದಿನಗಳ ಕಾಲಾವಕಾಶವನ್ನು ನೀಡಲು ಸಹ ಟೆಲಿವಿಷನ್ ಅಸೋಷಿಯೇಷನ್ ನಿರ್ಣಯ ತೆಗೆದುಕೊಂಡಿದೆ. ಭಾನುವಾರ ನಡೆದ ಮೀಟಿಂಗ್ನಲ್ಲಿ ಮಾರ್ಚ್ 19 ರಿಂದ ಮಾರ್ಚ್ 31ರ ವರೆಗೆ ಚಿತ್ರೀಕರಣವನ್ನು ಬಂದ್ ಮಾಡಲು ತೀರ್ಮಾನ ಕೈಗೊಂಡಿದ್ದಾರೆ.
ಈಗಾಗಲೇ ಕಿರುತೆರೆ ಕಲಾವಿದರಿಗೆ ಮಾಹಿತಿ ತಿಳಿಸಿದ್ದೇವೆ. ನಮ್ಮ ಶೂಟಿಂಗ್ನಲ್ಲಿ 100 ಕಲಾವಿದರೂ ಒಂದೇ ಕಡೆ ಸೇರುವುದಿಲ್ಲ. ಆದರೂ ಯಾರಿಗಾದರೂ ಆರೋಗ್ಯ ಸಮಸ್ಯೆ ಕಂಡು ಬಂದರೆ ಶೂಟಿಂಗ್ಗೆ ಬರಬೇಡಿ ಎಂದು ತಿಳಿಸಿದ್ದೇವೆ. ಸೀರಿಯಲ್ ಪ್ರತಿದಿನ ಪ್ರಸಾರವಾಗಬೇಕು. ಹೀಗಾಗಿ ನಾವು ದಿನ ಶೂಟಿಂಗ್ ಮಾಡಬೇಕು. ಆದ್ದರಿಂದ ನಿರ್ಮಾಪಕರಿಗೆ ಮೂರು ದಿನಗಳ ಕಾಲಾವಕಾಶ ನೀಡಿದ್ದೇವೆ ಎಂದು ಟೆಲಿವಿಷನ್ ಅಸೋಷಿಯೇಷನ್ ಅಧ್ಯಕ್ಷರಾದ ರವಿಕಿರಣ್ ಮಾಹಿತಿ ನೀಡಿದರು.