ಉಡುಪಿ: ಮಹಾಮಾರಿ ಕೊರೊನಾ ವೈರಸ್ಗೆ ದೇಶದಲ್ಲಿ 25 ಜನ ಬಲಿಯಾಗಿದ್ದಾರೆ. ವೈರಸ್ ಸೋಂಕಿತರ ಸಂಖ್ಯೆ ಸಾವಿರದ ಗಡಿ ಸಮೀಪಿಸಿದೆ. ಇದೀಗ ಜಿಲ್ಲೆಯಲ್ಲಿ ಮತ್ತೆ ಎರಡು ಕೊರೊನಾ ಪಾಸಿಟಿವ್ ಪತ್ತೆಯಾಗುವ ಮೂಲಕ ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 84ಕ್ಕೆ ಏರಿಕೆಯಾಗಿದೆ.
ಜಿಲ್ಲೆಯಲ್ಲಿ ಮತ್ತೆರಡು ಕೊರೊನಾ ಪಾಸಿಟಿವ್ ಪ್ರಕರಣದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಫೇಸ್ಬುಕ್ ವಿಡಿಯೋ ಮೂಲಕ ಮಾಹಿತಿ ನೀಡಿದ್ದಾರೆ. ಜಿಲ್ಲೆಯಲ್ಲಿ ಮೂವರು ಪಾಸಿಟಿವ್ ರೋಗಿಗಳಿದ್ದಾರೆ. ಈಗಾಗಲೇ ಪಾಸಿಟಿವ್ ರೋಗಿಗಳ ಪ್ರಾಥಮಿಕ ಸಂಪರ್ಕವನ್ನು ಟ್ರ್ಯಾಕ್ ಮಾಡಿದ್ದೇವೆ. ಹೀಗಾಗಿ ಜಿಲ್ಲೆಯ ಜನರು ಆತಂಕ ಪಡುವ ಅಗತ್ಯವಿಲ್ಲ. ಪ್ರಾಥಮಿಕ ಸಂಪರ್ಕದಲ್ಲಿ ಇದ್ದ ಎಲ್ಲರನ್ನೂ ಕ್ವಾರಂಟೈನ್ ಮಾಡಿದ್ದೇವೆ. ಕೊರೊನಾ ವೈರಸ್ಗೆ ಬಗ್ಗೆ ಎಲ್ಲಾ ಮುನ್ನೆಚ್ಚರಿಕಾ ಕ್ರಮವನ್ನು ಅನುಸರಿಸಿದ್ದೇವೆ ಎಂದು ತಿಳಿಸಿದ್ದಾರೆ.
ಇತ್ತ ಜಿಲ್ಲಾಧಿಕಾರಿ ಜಿ.ಜಗದೀಶ್ ಕೂಡ ಪಾಸಿಟಿವ್ ಬಂದಿರುವುದನ್ನು ಅಧಿಕೃತಗೊಳಿಸಿದ್ದು, ಸಚಿವರ ಹೇಳಿಕೆಯನ್ನು ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ.
ಉಡುಪಿಯಲ್ಲಿ ದುಬೈನಿಂದ ಬಂದಂತಹ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಮೂಲತಃ ದಾವಣಗೆರೆಯವನಾಗಿರುವ ಈತ, ಮಣಿಪಾಲಕ್ಕೆ ಉದ್ಯೋಗದ ಕಾರಣ ಶಿಫ್ಟ್ ಆಗಿದ್ದ. ನಂತರ ದುಬೈಗೆ ಪ್ರವಾಸಕ್ಕೆ ಎಂದು ತೆರಳಿದ್ದನು. ಅಲ್ಲಿ ಈತನಿಗೆ ಕೊರೊನಾ ಅಂಟಿಕೊಂಡಿದೆ. ಭಾರತ ತಲುಪಿ ಏಳು ದಿನದ ನಂತರ ಕೊರೊನಾ ವೈರಸ್ ಜೀವ ಪಡೆದುಕೊಂಡಿದೆ ಎಂದು ತಜ್ಞ ವೈದ್ಯರು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದರು.