– ಸೋಹಂ ಗುರೂಜಿಯಿಂದ ಯೋಗ ಪಾಠ
ನೆಲಮಂಗಲ: ಕೊರೊನಾ ವೈರಸ್ ಭೀತಿಯಿಂದ ದೇಶವೇ ಲಾಕ್ ಡೌನ್ ಆಗಿರುವ ಹಿನ್ನೆಲೆಯಲ್ಲಿ ವಿದೇಶಕ್ಕೆ ತೆರಳಬೇಕಾದ ಪ್ರಜೆಗಳು ಕುದೂರು ಹೋಬಳಿಯ ಆಲದಕಟ್ಟೆ ಬಳಿ ಇರುವ ಸೋಹಂ ಆರ್ಯುಯೋಗ ಆಶ್ರಮದಲ್ಲಿ ಕಾಲ ಕಳೆಯುತ್ತಿದ್ದಾರೆ.
ಕಳೆದ ಕೆಲವು ತಿಂಗಳಿನಿಂದ ಆಶ್ರಮದಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ವಿದೇಶಿಯರು ತಮ್ಮ ದೇಶಕ್ಕೆ ತೆರಳಲು ಟಿಕೆಟ್ ಬುಕ್ ಮಾಡಿದ್ದರು. ಈ ಮಧ್ಯೆ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನು ರದ್ದು ಮಾಡಿದ ಕಾರಣ ಆಶ್ರಮದಲ್ಲೇ ಉಳಿದುಕೊಂಡಿದ್ದಾರೆ.
ಈ ಆಶ್ರಮದಲ್ಲಿದ್ದ ವಿದೇಶಿಗರು ರಾಮನಗರ ಜಿಲ್ಲಾಡಳಿತದ ಅನುಮತಿ ಪಡೆದು ಇಲ್ಲೇ ತಂಗಿದ್ದು, ಆಶ್ರಮದ ಗುರು ಶ್ರೀ ಸೋಹಂ ಗುರೂಜಿ ಯೋಗ ಪಾಠ ಮಾಡುತ್ತಿದ್ದಾರೆ. ಮಾಗಡಿ ತಾಲೂಕಿನ ವೈದ್ಯಾಧಿಕಾರಿಗಳು ಇಲ್ಲಿಗೆ ಆಗಮಿಸಿದ ಚಿಕಿತ್ಸೆ ಹಾಗೂ ವಿದೇಶಿಗರನ್ನು ಗಮನಿಸುತ್ತಿದ್ದಾರೆ.
ಮಂಗೋಲಿಯ, ತೈವಾನ್, ಈಜಿಪ್ಟ್, ಗ್ರೀಸ್, ಫ್ರಾನ್ಸ್, ಬ್ರೆಜಿಲ್, ಅಮೆರಿಕದಿಂದ ಆಗಮಿಸಿದ ಪ್ರವಾಸಿಗರು ಇಲ್ಲಿ ಉಳಿದು ಕೊಂಡಿದ್ದಾರೆ. ಭಾರತೀಯ ಪುರಾತನ ಆಯುರ್ವೇದ ಯೋಗ ಥೆರಪಿ ಮೂಲಕ ಚಿಕಿತ್ಸೆ ನೀಡಿ, ವಿದೇಶಿಯರೆಲ್ಲ ತಮ್ಮ ದೈನಂದಿನ ಜೀವನ ಯೋಗದ ಮೂಲಕ ಕಳೆಯುತ್ತಿದ್ದಾರೆ. ಈ ವಿದೇಶಿಗರು ಯಾವುದೇ ಸಮಸ್ಯೆ ಹಾಗೂ ರೋಗವಿಲ್ಲದೆ ಗುಣಮುಖರಾಗಿ ತೆರಳುತ್ತಿದ್ದಾರೆ.
ಸೋಹಮ್ ಗುರೂಜಿ ಪ್ರತಿಕ್ರಿಯಿಸಿ, ಫೆಬ್ರವರಿಯಲ್ಲಿ ಹಲವು ದೇಶಗಳಿಂದ ಯೋಗ ಚಿಕಿತ್ಸೆಗೆ ಬಂದಿದ್ದರು. ಇವರು ಮರಳಿ ತಮ್ಮ ದೇಶಕ್ಕೆ ತೆರಳಬೇಕಾದಾಗ ವಿಮಾನ ಸೇವೆ ರದ್ದಾಯಿತು. ಹೀಗಾಗಿ ವಿದೇಶಕ್ಕೆ ತೆರಳದವರು ಇಲ್ಲೇ ಇರಬೇಕು. ಯಾವ ಕಡೆ ತೆರಳುವಂತಿಲ್ಲ ಎಂದು ಹೇಳಿ ಇಲ್ಲೇ ಕ್ವಾರಂಟೈನ್ ಮಾಡಲಾಗಿದೆ. ಕೆಲ ದೇಶಗಳ ರಾಯಭಾರ ಕಚೇರಿಗಳು ವಿಶೇಷ ವಿಮಾನದ ಮೂಲಕ ಪ್ರಜೆಗಳನ್ನು ಕರೆಸಿಕೊಂಡಿದೆ. ಇನ್ನು ಕೆಲವರು ಇಲ್ಲೇ ಇದ್ದು ಯೋಗ ಕಲಿಯುವುದರ ಜೊತೆಗೆ ಭಾರತೀಯ ಸಂಸ್ಕೃತಿಯ ಪಾಠವನ್ನು ಕಲಿಸಲಾಗುತ್ತಿದೆ ಎಂದು ತಿಳಿಸಿದರು.