ಬೆಂಗಳೂರು: ಚೆಲುವಿನ ಚಿತ್ತಾರ ಬೆಡಗಿ ನಟಿ ಅಮೂಲ್ಯಾ ದಂಪತಿ ಹಲವು ನಟ, ನಟಿಯರು ಹಾಗೂ ಗಣ್ಯರಂತೆ ಅವರೂ ಸಾಮಾಜಿಕ ಹೊಣೆಗಾರಿಕೆ ತೋರಿದ್ದು, ಸಹಾಯ ಹಸ್ತ ಚಾಚುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಸ್ಯಾಂಡಲ್ವುಡ್ ಚೆಲುವೆ ನಟಿ ಅಮೂಲ್ಯಾ ಅವರೂ ಸಾಮಾಜಿಗ ಹೊಣೆಗಾರಿಕೆಯನ್ನು ತೋರಿದ್ದು, ಹಲವರಿಗೆ ಈಗಾಗಲೇ ನೆರವು ನೀಡುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂಲಕ ನೆರವನ್ನು ನೀಡಿದ್ದಾರೆ. ಬಡವರಿಗೆ, ನಿರ್ಗತಿಕರಿಗೆ, ಅಸಹಾಯಕರಿಗೆ ಆರ್ಎಸ್ಎಸ್ ಈಗಾಗಲೇ ಸಹಾಯ ಮಾಡುತ್ತಿದ್ದು, ಇದೀಗ ನಟಿ ಅಮೂಲ್ಯ ಸಂಘದ ಮೂಲಕ ಸಹಾಯ ಮಾಡಿದ್ದಾರೆ.
ಕೊರೊನಾ ತುರ್ತು ಪರಿಸ್ಥಿತಿ ಹಿನ್ನೆಲೆ ಕೆಲಸವಿಲ್ಲದಂತಾಗಿದ್ದು, ಹಲವು ಬಡವರು ಊಟವಿಲ್ಲದೆ ಕಷ್ಟಪಡುತ್ತಿದ್ದಾರೆ. ಅಂತಹ ಅಸಹಾಯಕರಿಗೆ ಹಲವು ದಿನಗಳಿಂದ ನಟ, ನಟಿಯರು, ಧನಿಕರು, ಸಹಾಯ ಹಸ್ತ ಚಾಚುತ್ತಿದ್ದಾರೆ. ಕೆಲವರು ನೇರವಾಗಿ ಸಹಾಯ ಮಾಡಿದರೆ, ಇನ್ನೂ ಕೆಲವರು, ಸಂಘ, ಸಂಸ್ಥೆಗಳು, ಸಿಎಂ ಪರಿಹಾರ ನಿಧಿ, ಪಿಎಂ ಕೇರ್ಸ್ ಫಂಡ್ಗಳ ಮೂಲಕ ಧನ ಸಹಾಯ ಮಾಡುತ್ತಿದ್ದಾರೆ. ಇನ್ನೂ ಕೆಲವರು ಕಾರ್ಮಿಕರ ಖಾತೆಗೆ ನೇರವಾಗಿ ಹಣ ಹಾಕುತ್ತಿದ್ದಾರೆ. ಇದರ ಮಧ್ಯೆ ಅಲ್ಲಲ್ಲಿ ಆಹಾರ ಧಾನ್ಯ ವಿತರಿಸುವ ಕಾರ್ಯ ಸಹ ನಡೆಯುತ್ತಿದೆ.
ಇದೀಗ ನಟಿ ಅಮೂಲ್ಯಾ ಜಗದೀಶ್ ದಂಪತಿ ಆರ್ಎಸ್ಎಸ್ ಗೆ ಸುಮಾರು 1 ಟನ್ ಅಕ್ಕಿಯನ್ನು ನೀಡಿದ್ದು, ಈ ಮೂಲಕ ಬಡವರ ಹೊಟ್ಟೆ ತುಂಬಿಸಲು ಮುಂದಾಗಿದ್ದಾರೆ. ಇಂದು ಬೆಳಗ್ಗೆ ಆರ್ಎಸ್ಎಸ್ ನ ಅಭ್ಯುದಯ ಉಚಿತ ಕಲಿಕಾ ಕೇಂದ್ರಕ್ಕೆ ತೆರಳಿ ಅಕ್ಕಿ ಹಾಗೂ ಮಾಸ್ಕ್ ಗಳನ್ನು ನೀಡಿದ್ದಾರೆ. ಅಲ್ಲದೆ ಅವರ ಪತಿ ಸಹ ಹಲವು ದಿನಗಳಿಂದ ಬೀದಿ ನಾಯಿಗಳಿಗೆ ಆಹಾರ ನೀಡುತ್ತಿದ್ದಾರೆ. ಅಂದಹಾಗೆ ಇವರು ಸಹಾಯ ಮಾಡುತ್ತಿರುವುದು ಇದೇ ಮೊದಲ್ಲ ಹುಟ್ಟುಹಬ್ಬದಂತಹ ವಿಶೇಷ ಸಂದರ್ಭಗಳಲ್ಲಿ ಅನಾಥಾಶ್ರಮದ ಮಕ್ಕಳಿಗೆ ಪುಸ್ತಕ, ಬ್ಯಾಗ್ ನೀಡಿ, ಅವರೊಂದಿಗೆ ಕಾಲ ಕಳೆಯುತ್ತಾರೆ.
ಈ ಕುರಿತು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿರುವ ಅವರು, ದೇಶದಲ್ಲಿ ಪ್ರವಾಹ, ಭೂಕಂಪದಂತಹ ಪ್ರಕೃತಿ ವಿಕೋಪಗಳಾದಾಗ ಮತ್ತು ಈಗಿನ ಕೋರೋನಾ ವಿಪತ್ತಿನ ಸಂದರ್ಭದಲ್ಲಿಯೂ ಯಾವುದೇ ಜಾತಿ, ಧರ್ಮ ಎಂದು ಭೇದ ಮಾಡದೆ ಪ್ರತಿಯೊಬ್ಬರೂ ಭಾರತೀಯರು ಎಂದು ಸಹಾಯ ಮಾಡುವ ಆರ್ಎಸ್ಎಸ್ ಸಂಘಟನೆಗೆ ನಮ್ಮ ಕಿರು ಸಹಾಯ ನೀಡಿದ ಕ್ಷಣ. ಬಿ ಗುಡ್ ಡು ಗುಡ್ ಎಂದು ಬರೆದುಕೊಂಡಿದ್ದಾರೆ.
ಬಾಲ ನಟಿಯಾಗಿ ಹಲವು ಸಿನಿಮಾಗಳಲ್ಲಿ ನಟಿಸಿದರೂ ಅಮೂಲ್ಯಾ ಅವರು ಹೆಚ್ಚು ಪ್ರಚಲಿತಕ್ಕೆ ಬಂದಿದ್ದು ಚೆಲುವಿನ ಚಿತ್ತಾರ ಸಿನಿಮಾ ಮೂಲಕ ಅವರ ಐಶು ಪಾತ್ರ ಇನ್ನೂ ಜನಪ್ರಿಯ. 2001ರಲ್ಲಿ ‘ಪರ್ವ’ ಚಿತ್ರದ ಮೂಲಕ ಬಣ್ಣ ಹಚ್ಚಿದ್ದ ಇವರು, ಚಿಕ್ಕವಯಸ್ಸಿನಲ್ಲಿಯೇ ಹೀರೋಯಿನ್ ಸಹ ಆದರು. 2017ರಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ‘ಮುಗುಳು ನಗೆ’ ಸಿನಿಮಾ ನಂತರ ಅಮೂಲ್ಯ ಯಾವ ಸಿನಿಮಾದಲ್ಲಿಯೂ ನಟಿಸಿಲ್ಲ. ಜಗದೀಶ್ ಆರ್ ಚಂದ್ರ ಜೊತೆ ಮೂರು ವರ್ಷಗಳ ಹಿಂದೆ ಹಸೆಮಣೆ ಏರಿದ್ದಾರೆ. ಸಿನಿಮಾಗಳಲ್ಲಿ ಹೆಚ್ಚು ನಟಿಸುತ್ತಿಲ್ಲ. ಆದರೆ ಸಾಮಾಜಿಕ ಕೆಲಸಗಳಲ್ಲಿ ಸಂಪೂರ್ಣ ತೊಡಗಿಸಿಕೊಂಡಿದ್ದಾರೆ.