ಮಂಗಳೂರು: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಅಮೇರಿಕಾದ ಕ್ರೂಸ್ ಒಂದರಲ್ಲಿ 131 ಭಾರತೀಯರು ಬಂಧಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಭಾರತೀಯ ಯುವಕರು ಆಡಿಯೋ ಮೂಲಕ ಅಳಲು ತೋಡಿಕೊಂಡಿದ್ದು, 131 ಭಾರತೀಯರಲ್ಲಿ ಮಂಗಳೂರಿನ ಮೊರ್ಗನ್ಸ್ ಗೇಟ್ ನಿವಾಸಿ ನಟೇಶ್ ಬಂಗೇರ ಕೂಡಾ ದಿಗ್ಬಂಧನಕ್ಕೆ ಒಳಗಾಗಿದ್ದಾರೆ. ಇವರಿಗೆ ಅಮೆರಿಕ ವಿಮಾನ ನಿಲ್ದಾಣದಲ್ಲಿ ಸ್ಕ್ರೀನಿಂಗ್ ಮಾಡಲಾಗಿದ್ದು, 131 ಮಂದಿಯೂ ಪಾಸ್ ಆಗಿದ್ದಾರೆ. ಆದರೆ ಕೊರೊನಾ ಟೆಸ್ಟಿಂಗ್ ಕಿಟ್ ಇಲ್ಲದ ಕಾರಣ ಕೊರೊನಾ ವೈರಸ್ ನೆಗೆಟಿವ್ ಸರ್ಟಿಫಿಕೇಟ್ ನೀಡಲಾಗುತ್ತಿಲ್ಲ.
ರಿಪೋರ್ಟ್ ಇಲ್ಲದೇ ಭಾರತದ ವಿಮಾನ ಹತ್ತಲು ಏರ್ ಪೋರ್ಟ್ ಅಧಿಕಾರಿಗಳು ಬಿಡುತ್ತಿಲ್ಲ. ಭಾರತದ ವಿಮಾನವೇರಲು ಅನುಮತಿಗಾಗಿ ಕಾಯುತ್ತಿದ್ದಾರೆ. ಇಂದು ಸಂಜೆಯೊಳಗೆ ಅವಕಾಶ ಸಿಗದೇ ಇದ್ದಲ್ಲಿ ಮತ್ತೆ 15 ದಿನ ದಿಗ್ಬಂಧನಕ್ಕೆ ಒಳಗಾಗಲಿದ್ದಾರೆ ಎನ್ನಲಾಗಿದೆ. ಇಂದು ಸಂಜೆ ಈ ಹಡಗು ಸಮುದ್ರದ ಮಧ್ಯೆ ಪ್ರಯಾಣಿಸಲಿದೆ. ಹೀಗಾಗಿ 131 ಜನ ಸಹ ಆತಂಕಕ್ಕೊಳಗಾಗಿದ್ದಾರೆ.
ಕೊರನಾ ಭೀತಿಯಿಂದಾ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ದಿಗ್ಬಂಧನ ವಿಧಿಸಲಾಗಿದೆ. ಇದರಲ್ಲಿ ಕೆಲ ಭಾರತೀಯರು ಸಹ ಸಿಕ್ಕಿಹಾಕಿಕೊಂಡಿದ್ದಾರೆ. ಇತ್ತೀಚೆಗೆ ಇಟಲಿ, ಡೆನ್ಮಾರ್ಕ್ ಬಳಿಕ ಕೊರೊನಾ ಎಫೆಕ್ಟ್ಗೆ ಕುವೈತ್ನಲ್ಲಿರುವ ಕರಾವಳಿಗರು ಅತಂತ್ರವಾಗಿದ್ದು, ಸರ್ಕಾರದಿಂದಲೇ ಕೆಲ ಘಟಕಗಳ ಮೂಲಕ ಆಹಾರ ಒದಗಿಸುವುದನ್ನು ಹೊರತು ಪಡಿಸಿದರೆ ಯಾರೂ ಹೊರಗೆ ಬರುವಂತಿಲ್ಲ ಎಂಬ ಆದೇಶ ನೀಡಲಾಗಿದೆ. ಹೀಗಾಗಿ ಕುವೈತ್ ಸಂಪೂರ್ಣ ಸ್ತಬ್ಧವಾಗಿದೆ.
ರಸ್ತೆ, ಬೀಚ್, ಮಾಲ್ ಗಳು ಮತ್ತು ಏರ್ ಪೋರ್ಟ್ ಗಳನ್ನು ಕುವೈತ್ ಬಂದ್ ಮಾಡಿದೆ. ಬಸ್ ಸಂಚಾರವನ್ನು ಸಹ ಬಂದ್ ಮಾಡಲಾಗಿದೆ.
ನಾಗರಿಕರು ಮನೆಯಲ್ಲೇ ಇರುವಂತೆ ಕುವೈತ್ ಸರ್ಕಾರ ಆದೇಶ ನೀಡಿದೆ. ಅಗತ್ಯ ಸೇವೆ ನೀಡುವ ಇಲಾಖೆಯನ್ನು ಹೊರತು ಪಡಿಸಿ ಸರ್ಕಾರದ ಎಲ್ಲ ಇಲಾಖೆ, ಬ್ಯಾಂಕ್, ಶಾಲಾ, ಕಾಲೇಜುಗಳನ್ನು ಬಂದ್ ಮಾಡಲಾಗಿದೆ. ಈ ಕುರಿತು ಕನ್ನಡಿಗ ಮೋಹನ್ ದಾಸ್ ಅವರು ವಿಡಿಯೋ ಮೂಲಕ ಅಲ್ಲಿನ ಚಿತ್ರಣವನ್ನು ವಿವರಿಸಿದ್ದರು. ಇದೀಗ ಅಮೆರಿಕದಲ್ಲಿ ಭಾರತೀಯರು ಸಂಕಷ್ಟಕ್ಕೆ ಸಿಲುಕಿರುವ ವರದಿ ಬಂದಿದೆ.