ನವದೆಹಲಿ: ಲಾಕ್ಡೌನ್ ವಿಸ್ತರಿಸಬೇಕೇ ಬೇಡವೇ ಎನ್ನುವುದರ ಬಗ್ಗೆ ಶನಿವಾರ ರಾತ್ರಿ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಭಾಷಣ ಮಾಡುವ ಸಾಧ್ಯತೆಯಿದೆ.
ನಾಳೆ ಮೋದಿ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಲಿದ್ದಾರೆ. ಸಭೆಯ ಬಳಿಕ ಏ.15ರ ನಂತರ ದೇಶವ್ಯಾಪಿ ಲಾಕ್ಡೌನ್ ವಿಸ್ತರಣೆಯಾಗುತ್ತಾ? ಇಲ್ಲವೋ ಎನ್ನುವ ವಿಚಾರದ ಬಗ್ಗೆ ಮಾತನಾಡಲಿದ್ದಾರೆ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮವೊಂದು ವರದಿ ಮಾಡಿದೆ.
ಇಲ್ಲಿಯವರೆಗೆ ಒಡಿಶಾ ರಾಜ್ಯ ಏ.30ರ ವರೆಗೆ ಲಾಕ್ಡೌನ್ ವಿಸ್ತರಿಸಿದೆ. ಉತ್ತರ ಪ್ರದೇಶದ 15 ಜಿಲ್ಲೆಗಳಲ್ಲಿ ಲಾಕ್ಡೌನ್ 15 ದಿನಗಳ ಕಾಲ ವಿಸ್ತರಣೆಯಾಗಿದೆ. ಉಳಿದ ರಾಜ್ಯಗಳ ನಿರ್ಧಾರ ಇನ್ನೂ ಪ್ರಕಟವಾಗಿಲ್ಲ.
ಈ ಹಿಂದೆ ಮಾರ್ಚ್ 19 ರಂದು ದೇಶವನ್ನು ಉದ್ದೇಶಿಸಿ ಮಾ.21 ರಂದು ಜನತಾ ಕರ್ಫ್ಯೂ ಮಾಡಬೇಕೆಂದು ಕೇಳಿಕೊಂಡಿದ್ದರು. ಇದಾದ ಬಳಿಕ ಮಾ.24 ರಂದು 21 ದಿನಗಳ ಲಾಕ್ಡೌನ್ ಘೋಷಣೆ ಮಾಡಿದ್ದರು.
ಇದಾದ ಬಳಿಕ ಏ.5 ರಂದು ಕೊರೊನಾ ವಿರುದ್ಧದ ಹೋರಾಟಕ್ಕೆ ಒಗ್ಗಟ್ಟು ಪ್ರದರ್ಶಿಸಲು ರಾತ್ರಿ 9 ಗಂಟೆಗೆ ವಿದ್ಯುತ್ ದೀಪ ಆಫ್ ಮಾಡಿ ದೀಪ/ ಕ್ಯಾಂಡಲ್ ಲೈಟ್/ ಮೊಬೈಲ್ ಟಾರ್ಚ್ ಬೆಳಗಿ ಎಂದು ಮನವಿ ಮಾಡಿದ್ದರು. ಇದಕ್ಕೂ ದೇಶದಲ್ಲಿ ಭಾರೀ ಬೆಂಬಲ ಸಿಕ್ಕಿತ್ತು.