ಮಡಿಕೇರಿ: ರಾಜ್ಯ ಸರ್ಕಾರ ಆದೇಶ ಹೊರಡಿಸುವ ಮೊದಲೇ ಕೊಡಗಿನ ಹೋಂ ಸ್ಟೇಗಳ ಮಾಲೀಕರು ಸ್ವಯಂ ಪ್ರೇರಿತರಾಗಿ ಬಂದ್ ಮಾಡಿದ್ದಾರೆ.
ಹೌದು. ದಕ್ಷಿಣ ಕಾಶ್ಮೀರ, ಮಂಜಿನ ನಗರಿ ಮಡಿಕೇರಿಗೆ ಪ್ರವಾಸಿಗರು ಹೆಚ್ಚಾಗಿ ಬರುತ್ತಾರೆ. ಇಲ್ಲಿನ ಪ್ರವಾಸಿತಾಣಗಳನ್ನು ನೋಡಲು ಎಂಜಾಯ್ ಮಾಡಲು ದೇಶ ವಿದೇಶಗಳಿಂದ ಪ್ರವಾಸಿಗರು ಕೊಡಗಿನ ಸೌಂದರ್ಯ ಸವಿಯಲು ಬರುತ್ತಿದ್ದರು. ಇದೀಗ ಕೊರೊನಾ ವೈರಸ್ ಭೀತಿ ಪ್ರವಾಸಿಗರಿಗೂ ಕಾಡುತ್ತಿದ್ದು, ಮನೆಯಿಂದ ಹೋರಗೆ ಬರಲು ಹಿಂದೆಟ್ಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಪ್ರವಾಸಿಗರಿಲ್ಲದೇ ಕೊಡಗಿನ ಪ್ರವಾಸಿತಾಣಗಳು ಬಿಕೋ ಎನ್ನುತ್ತಿದೆ.
ಈ ಹಿನ್ನೆಲೆಯಲ್ಲಿ ಹೋಂ ಸ್ಟೇ ಮಾಲೀಕರು ಸ್ವಯಂ ಪ್ರೇರಿತರಾಗಿ ಕಳೆದ 1 ವಾದದಿಂದ ಬಂದ್ ಮಾಡಿದ್ದಾರೆ. ಹೋಂ ಸ್ಟೇಗೆ ಈಗಾಗಲೇ ಬುಕ್ ಮಾಡುವವರು ಸಂಖ್ಯೆ ವಿರಳವಾಗಿದ್ದು, ಕೆಲವೇ ಕೆಲವು ಮಂದಿ ಮಾತ್ರ ಬುಕ್ಕಿಂಗ್ ಮಾಡುತ್ತಿದ್ದಾರೆ. ಆದರೆ ಈ ಬುಕ್ಕಿಂಗ್ಗಳನ್ನೂ ಹೋಂ ಸ್ಟೇ ಮಾಲೀಕರು ನಿರಾಕರಣೆ ಮಾಡುತ್ತಿದ್ದಾರೆ. ತಮ್ಮಗೆ ನಷ್ಟ ಆದ್ರೂ ಪರವಾಗಿಲ್ಲ ನಾಡಿನ ಜನರ ಆರೋಗ್ಯ ಮುಖ್ಯ, ಹೀಗಾಗಿ ನಾವೇ ಸ್ವಯಂ ಪ್ರೇರಿತವಾಗಿ ಬಂದ್ ಮಾಡುತ್ತಿದ್ದೇವೆ ಎಂದು ಮಾಲೀಕರು ತಿಳಿಸಿದ್ದಾರೆ.
ಈಗಾಗಲೇ ಕೊಡಗು ಜಿಲ್ಲೆಯಲ್ಲಿ ಕಳೆದ ಎರಡು ವರ್ಷದಿಂದ ಆದ ಪ್ರಾಕೃತಿಕ ವಿಕೋಪದಿಂದ ಸಾಕಷ್ಟು ನಷ್ಟ ಅನುಭವಿಸಿದ್ದೆವು. ಆದರೆ ಈ ಕೊರೊನಾ ವೈರಸ್ ಭೀತಿ ರಾಜ್ಯವನ್ನು ಕಾಡುತ್ತಿದೆ. ನಮಗೆ ನಷ್ಟ ಆದ್ರೂ ಪರವಾಗಿಲ್ಲ ಎಂದು ಕೊಡಗಿನಲ್ಲಿ ಸುಮಾರು 700ಕ್ಕೂ ಅಧಿಕ ಹೋಂ ಸ್ಟೇಗಳನ್ನು ಮಾಲೀಕರು ಬಂದ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಇಂದಿನಿಂದ ಗ್ರಾಮಪಂಚಾಯ್ತಿ ಪಿಡಿಓಗಳು ಹೋಂ ಸ್ಟೇ ಮಾಲೀಕರಿಗೆ ಬಂದ್ ಮಾಡಲು ನೋಟಿಸ್ ಕೂಡ ನೀಡಲಾಗುತ್ತಿದೆ. ಇದರಿಂದ ಹೋಂ ಸ್ಟೇ ಉದ್ಯಮ ಹಾಗೂ ಸಿಬ್ಬಂದಿಗಳ ಕುಟುಂಬಗಳಲ್ಲಿ ಆತಂಕ ಸೃಷ್ಟಿಯಾಗಿದ್ದು, ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿದೆ ಎನ್ನಲಾಗಿದೆ.