ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರು ನಗರ ಹೊರವಲಯದ ಹಿರೇ ಬಿದನೂರಿನಲ್ಲಿ ಪೊಲೀಸರು ಮನೆ-ಮನೆಗೂ ತೆರಳಿ ದಿನಬಳಕೆ ಅಗತ್ಯ ವಸ್ತುಗಳನ್ನು ಉಚಿತವಾಗಿ ವಿತರಣೆ ಮಾಡಿದರು.
132 ಮನೆಗಳಲ್ಲಿರುವ ಹಿರೇ ಬಿದನೂರಿನಲ್ಲಿ ಸುಮಾರು 872 ಮಂದಿಯನ್ನು ಗೃಹಬಂಧನ ಮಾಡಲಾಗಿದೆ. ಹೀಗಾಗಿ ಪೊಲೀಸರು ದಾನಿಗಳ ನೆರವಿನಿಂದ ದಿನಬಳಕೆಗೆ ಬೇಕಾದ ಅಗತ್ಯ ವಸ್ತುಗಳನ್ನು ಸಂಗ್ರಹಿಸಿ ಅವುಗಳನ್ನು ಪ್ಯಾಕ್ ಮಾಡಿ ವಿತರಣೆ ಮಾಡಿದ್ದಾರೆ. ಚಿಕ್ಕಬಳ್ಳಾಪುರ ಉಪ ವಿಭಾಗದ ಡಿವೈಎಸ್ಪಿ ರವಿಶಂಕರ್ ನೇತೃತ್ವದಲ್ಲಿ ಮನೆ ಮನೆಗೆ ತೆರಳಿದ ಆರಕ್ಷಕರು ಉಚಿತ ಮಾಸ್ಕ್ ಹಾಗೂ ಅಗತ್ಯ ದಿನಬಳಕೆ ವಸ್ತುಗಳನ್ನು ವಿತರಿಸಿದರು.
ಇದೇ ವೇಳೆ ತಮಗೆ ಅಗತ್ಯ ವಸ್ತುಗಳು ಬೇಕಾದಲ್ಲಿ ತಾಲೂಕು ಆಡಳಿತ ನೀಡಿರುವ ದೂರವಾಣಿ ಸಂಖ್ಯೆಗೆ ಕರೆ ಮಾಡಿ. ದಯವಿಟ್ಟು ಮನೆಯಿಂದ ಯಾರೂ ಕೂಡ ಹೊರಗೆ ಬರಬೇಡಿ ಅಂತ ಪೊಲೀಸರು ನಾಗರಿಕರಲ್ಲಿ ಮನವಿ ಮಾಡಿಕೊಂಡರು.
ಹಿರೇ ಬಿದನೂರಿನಲ್ಲಿ ಸೋಂಕಿತರ ಮನೆಗಳು ಇರುವ ಕಾರಣ ಈಗ ಇಡೀ ಹಿರೇ ಗ್ರಾಮವನ್ನು ಸಂಪೂರ್ಣ ಲಾಕ್ಡೌನ್ ಮಾಡಲಾಗಿದೆ. ಹೀಗಾಗಿ ಹಿರೇಬಿದನೂರಿನಿಂದ ಯಾರೂ ಕೂಡ ಹೊರಗೆ ಬರುವಂತಿಲ್ಲ. ಕೊರೊನಾ ವೈರಸ್ ಹರಡುವಿಕೆಯನ್ನು ತಡೆಯುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಇದುವರೆಗೂ ಗೌರಿಬಿದನೂರಿನಲ್ಲಿ 10 ಮಂದಿಗೆ ಕೊರೊನಾ ಸೋಂಕು ಧೃಡವಾಗಿದೆ.