– ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್ನಲ್ಲಿ ಬಯಲು
ಮಡಿಕೇರಿ: ಇಡೀ ಜಗತ್ತನ್ನೇ ಕೊರೊನಾ ವೈರಸ್ ಸೋಂಕಿನ ಮಹಾ ಮಾರಿ ನಡುಗಿಸುತ್ತಿದೆ. ರಾಜ್ಯ ರಾಜಧಾನಿಯಲ್ಲೂ ಹೈದರಾಬಾದ್ ಮೂಲದ ಟೆಕ್ಕಿಯೊಬ್ಬರಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ರಾಜ್ಯದ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಸಂಖ್ಯೆ ಸಾಕಷ್ಟು ಇಳಿಕೆಯಾಗಿದೆ. ಅಷ್ಟೇ ಅಲ್ಲದೇ ಈ ವೈರಸ್ನ ಭೀತಿ ಇದೀಗ ಸಾರಿಗೆ ಬಸ್ಸಿಗೂ ತಟ್ಟಿದೆ.
ಕೆಎಸ್ಆರ್ಟಿಸಿ ಬಸ್ಸುಗಳಲ್ಲಿ ಪ್ರಯಾಣಿಕರು ಇಲ್ಲದೇ ರಾಜ್ಯದ ಬಹುತೇಕ ಕಡೆಗಳಲ್ಲಿ ಜನಸಂಖ್ಯೆ ವಿರಳವಾಗಿದೆ. ಮಂಜಿನ ನಗರಿ ಮಡಿಕೇರಿಯಲ್ಲೂ ಪ್ರಯಾಣಿಕರ ಸಂಖ್ಯೆ ಇಳಿಕೆಯಾಗಿದ್ದು, ಮಡಿಕೇರಿಯಿಂದ ಹಾಸನ, ಮೈಸೂರು, ಬೆಂಗಳೂರು, ಮಂಗಳೂರಿಗೆ ತೆರಳುವ ಬಸ್ಸುಗಳಲ್ಲಿ ಹೆಚ್ಚಾಗಿ ಪ್ರಯಾಣಿಕರು ಕಂಡು ಬರುತ್ತಿಲ್ಲ. ಬೆರಳೆಣಿಕೆಯಷ್ಟು ಮಾತ್ರ ಪ್ರಯಾಣಿಕರು ಸಂಚಾರ ಮಾಡುತ್ತಿದ್ದಾರೆ.
ಬಸ್ಸಿನ ಒಳಗೆ ಕೂರುವಾಗ ಮಾಸ್ಕ್ ಹಾಕಿಕೊಂಡು ಪ್ರಯಾಣ ಮಾಡುತ್ತಿದ್ದಾರೆ. ಈ ಬಗ್ಗೆ ಪಬ್ಲಿಕ್ ಟಿವಿ ತಂಡ ಹಾಸನಕ್ಕೆ ಹೋಗುವ ಬಸ್ಸಿನಲ್ಲಿ ರಿಯಾಲಿಟಿ ಚೆಕ್ ಮಾಡಿದ್ದಾರೆ.
ಬಸ್ಸಿನ ನಿರ್ವಾಹಕರೊಬ್ಬರು ಪಬ್ಲಿಕ್ ಟಿವಿಯೊಂದಿಗೆ ಮಾತಾನಾಡಿ, ನಾವು ಈ ಹಿಂದೆ ಮಡಿಕೇರಿ ಟು ಹಾಸನಕ್ಕೆ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದೆವು. ಒಂದು ಬಾರಿಗೆ ಕಲೆಕ್ಷನ್ ಸುಮಾರು 12000 ಆಗುತಿತ್ತು. ಈಗ ಕೊರೊನಾ ವೈರಸ್ ಭೀತಿಯಿಂದ ಪ್ರಯಾಣಿಕರು ಇಲ್ಲದೇ ಕೇವಲ 2000, 3000 ಆಗುತ್ತಿದೆ. ಇದರಿಂದ ಸಂಸ್ಥೆಗೆ ತುಂಬಾ ನಷ್ಟ ಆಗುತ್ತಿದೆ ಎಂದು ಹೇಳಿದರು.
ಕೊರೊನಾ ವೈರಸ್ ಭೀತಿ ಗ್ರಾಮೀಣ ಪ್ರದೇಶಕ್ಕೂ ಹಬ್ಬಿದ್ದು, ಜನರು ಸರ್ಕಾರಿ ಬಸ್ ಹತ್ತಲು ಹಿಂದೆ ಮುಂದೆ ಯೋಚನೆ ಮಾಡುವ ಪರಿಸ್ಥಿತಿಗೆ ಬಂದಿದ್ದಾರೆ ಎನ್ನಲಾಗುತ್ತಿದೆ.