ನೆಲಮಂಗಲ: ಕೊರೊನ ವೈರಸ್ ಭೀತಿಯಿಂದಾಗಿ ರಾಜ್ಯದೆಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ. ಅಲ್ಲದೆ ಹಲವೆಡೆ ಚಿಕನ್ ವ್ಯಾಪಾರಿಗಳು ಸ್ವಯಂ ಪ್ರೇರಿತರಾಗಿ ಕೋಳಿಗಳನ್ನು ಜೀವಂತ ಸಮಾಧಿ ಮಾಡುತ್ತಿದ್ದಾರೆ. ಆದರೆ ನೆಲಮಂಗಲದಲ್ಲಿ ವ್ಯಾಪಾರಿಗಳು ಇದಾವುದರ ಅರಿವಿಲ್ಲದೆ, ವ್ಯಾಪಾರ ಮುಂದುವರಿಸಿದ್ದಾರೆ.
ಸರ್ಕಾರ ಒಂದು ವಾರಗಳ ವರೆಗೆ ಹೆಚ್ಚು ಜನಸಂದಣಿ ಇರುವ ಅಂಗಡಿ ಮುಂಗಟ್ಟುಗಳು, ಚಿತ್ರಮಂದಿರಗಳು, ಮಾಲ್ಗಳು, ಮಾಂಸದ ಅಂಗಡಿಗಳು ಜಾತ್ರೆ, ಶಾಲಾ ಕಾಲೇಜುಗಳು, ಸೇರಿದಂತೆ ಇನ್ನಿತರ ಕಡೆಗಳಲ್ಲಿ ಜನ ಸೇರದಂತೆ ತಿಳಿಸಿದೆ. ಆದರೆ ನೆಲಮಂಗಲ ನಗರಸಭೆ ವ್ಯಾಪ್ತಿಯ ಹಲವಾರು ಮಾಂಸದ ಅಂಗಡಿಗಳು ಹಾಗೂ ಚಿಕನ್ ಸೆಂಟರ್ ಗಳು ಎಗ್ಗಿಲ್ಲದೆ ವ್ಯಾಪಾರ ಮಾಡುತ್ತಿದ್ದು, ಈ ಮೂಲಕ ಸರ್ಕಾರದ ಆದೇಶವನ್ನು ಗಾಳಿಗೆ ತೂರಿವೆ. ಜಿಲ್ಲಾಧಿಕಾರಿ ಈ ಕುರಿತು ಸೂಚನೆ ನೀಡಿದ್ದರೂ ಪಾಲನೆಮಾಡಿಲ್ಲ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿಯವರ ಆದೇಶದಂತೆ ನೆಲಮಂಗಲ ನಗರಸಭೆ ಅಧಿಕಾರಿಗಳು ಸಹ ವ್ಯಾಪಾರಿಗಳಿಗೆ ನೋಟಿಸ್ ಜಾರಿ ಮಾಡಿದ್ದರು. ನೋಟಿಸ್ಗೂ ಬಗ್ಗದೆ ವ್ಯಾಪಾರಸ್ಥರು ಅಂಗಡಿಗಳನ್ನು ತೆರೆದಿದ್ದಾರೆ.