ಬೆಂಗಳೂರು: ಕೊರೊನಾ ಎರಡು ಅಲೆಗಳಿಂದ ಜನ ತತ್ತರಿಸಿ ಹೋಗಿ ಭಾರೀ ಸಾವು, ನೋವುಗಳು ಸಂಭವಿಸಿವೆ. ಈಗ ಜನ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಇದೇ ಹೊತ್ತಲ್ಲಿ ಮೂರನೇ ಅಲೆಯ ಬಗ್ಗೆ ತಜ್ಞರು ಎಚ್ಚರಿಕೆಯನ್ನು ಸಹ ನೀಡಿದ್ದರು. ಆದರೆ ಇದೀಗ ಹೊಸ ಅಧ್ಯಯನದ ಪ್ರಕಾರ ಮೂರನೇ ಅಲೆ ಬರೋದು ಅನುಮಾನ ಎನ್ನಲಾಗುತ್ತಿದೆ.
ಮೂರನೇ ಅಲೆ ಆಗಸ್ಟ್ ಮೂರನೇ ವಾರ ಇಲ್ಲವೇ ಕೊನೆಯ ವಾರ ಕಾಣಿಸಿಕೊಳ್ಳಬಹುದು. ಸೆಪ್ಟೆಂಬರ್ ಮೊದಲನೇ ವಾರ ಇಲ್ಲವೇ ಎರಡನೇ ವಾರ ಕಾಣಿಸಿಕೊಳ್ಳುತ್ತೆ ಎಂದು ಕೆಲ ಅಧ್ಯಯನಗಳು ಹೇಳಿದ್ದವು. ಅಧ್ಯಯನಗಳ ಈ ಊಹೆ ಈಗ ಉಲ್ಟಾ ಆಗಿದೆ. ಹೀಗಾಗಿ ಕೊರೊನಾ ಮೂರನೇ ಅಲೆ ಯಾವಾಗ ಬರುತ್ತೆ ಎಂದು ಹೇಳುವುದು ಅಸಾಧ್ಯವಾಗಿದೆ
ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶ್ವಾಸಕೋಶ ತಜ್ಞ ಡಾ.ಸತ್ಯನಾರಾಯಣ, ಯಾವಾಗ ಹರಡುವಿಕೆ ಪ್ರಮಾಣ ಕಡಿಮೆಯಾಗುತ್ತದೆಯೋ ಆಗ ಸಹಜವಾಗಿಯೇ ರೂಪಾಂತರ ವೈರಸ್ ಪತ್ತೆ ಕಡಿಮೆಯಾಗುತ್ತದೆ. ಆದರೆ ಇದು ಬೂದಿ ಮುಚ್ಚಿದ ಕೆಂಡದ ರೀತಿಯ ಸ್ಥಿತಿ. ಹೀಗಾಗಿ ಮುಂಜಾಗೃತಾ ಕ್ರಮಗಳನ್ನು ಮರೆಯಬಾರದು ಎಂದು ತಿಳಿಸಿದರು. ಇದನ್ನೂ ಓದಿ: 39 ಕೋಟಿ ತೆರಿಗೆ ಬಾಕಿ- ಬಿಬಿಎಂಪಿಯಿಂದ ಮಂತ್ರಿ ಮಾಲ್ಗೆ ಬೀಗ
ಈಗೀಗ ಶಾಲೆ, ಕಾಲೇಜುಗಳು ಪ್ರಾರಂಭವಾಗುತ್ತಿವೆ. ಬಿಸಿನೆಸ್ ವಲಯ ಚೇತರಿಸಿಕೊಳ್ಳುತ್ತಿದೆ. ಇದೆಲ್ಲದರ ಮಧ್ಯೆ ಕೊರೊನಾ ನಿಯಮಗಳನ್ನು ಮರೆಯಬಾರದು. ಪರಿಸರಕ್ಕೆ ಅನುಗುಣವಾಗಿ ವೈರಸ್ ರೂಪಾಂತರವಾಗುತ್ತದೆ. ನಾವು ಕೊರೊನಾ ನಿಯಮ ಪಾಲಿಸುವ ಮೂಲಕ, ನಮಗೆ ಬರದಂತೆ ನೋಡಿಕೊಂಡರೆ ವೈರಸ್ ರೂಪಾಂತರ ಹಾಗೂ 3ನೇ ಅಲೆಯನ್ನು ತಡೆಯಬಹುದು ಎಂದು ತಿಳಿಸಿದರು.
ಕಾಣಿಸಿಕೊಂಡಿಲ್ಲ ಯಾಕೆ?
ರಾಜ್ಯದಲ್ಲಿ ಈ ವರೆಗೆ ಹೊಸ ತಳಿ ಕಾಣಿಸಿಕೊಂಡಿಲ್ಲ. ಹೊಸ ತಳಿ ಕಾಣಿಸಿಕೊಂಡಾಗ ಮಾತ್ರ ಮೂರನೇ ಅಲೆ ಬರುವವುದರ ಬಗ್ಗೆ ಹೇಳಬಹುದಾಗಿದೆ. ಅಲ್ಲದೆ ಕೊರೊನಾ ವ್ಯಾಕ್ಸಿನೇಷನ್ ವೇಗ ಹೆಚ್ಚಾಗಿರುವುದು ಮೂರನೇ ಅಲೆ ವಿಳಂಬಕ್ಕೆ ಪ್ರಮುಖ ಕಾರಣವಾಗಿದೆ. ವ್ಯಾಕ್ಸಿನೇಷನ್ ಹೆಚ್ಚಾದಷ್ಟು ಮನುಷ್ಯನ ದೇಹದಲ್ಲಿ ಪ್ರತಿಕಾಯ ಸೃಷ್ಟಿಯಾಗಿ ರೂಪಾಂತರಿ ವೈರಸನ್ನು ತಡೆಗಟ್ಟಬಹುದಾಗಿದೆ. ಇದನ್ನೂ ಓದಿ: ಮೆಟ್ರೋ ಕಾಮಗಾರಿ – 30 ಅಡಿ ಮಣ್ಣು ಕುಸಿತ, ತಪ್ಪಿತು ಭಾರೀ ಅನಾಹುತ
ಕೊರೊನಾ ವೈರಸ್ ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಪ್ರಮಾಣ ಸಹ ಕಡಿಮೆಯಾಗಿದ್ದು, ಎರಡೆರಡು ಅಲೆಯ ಸಾವು, ನೋವು ನೋಡಿ ಜನ ಮನೆಗಳಲ್ಲಿ ಜಾಗೃತರಾಗಿದ್ದಾರೆ. ಇವು ಮೂರನೇ ಅಲೆ ಕಾಣಿಸಿಕೊಳ್ಳದಿರುವುದಕ್ಕೆ ಪ್ರಮುಖ ಕಾರಣಗಳಾಗಿವೆ.
ಜನರ ದೇಹದಲ್ಲಿ ಆ್ಯಂಟಿ ಬಾಡಿ ಡೆವಲಪ್(ಪ್ರತಿಕಾಯ ಸೃಷ್ಟಿ) ಆಗಿರುವುದು ಮೂರನೇ ಅಲೆ ತಡವಾಗಿದೆ. ಕೊರೊನಾಗೆ ಮೃತಪಟ್ಟ ಕುಟುಂಬದಲ್ಲಿ ಮುನ್ನೆಚ್ಚರಿಕೆ ವಹಿಸಿರುವುದು. ಕೊರೊನಾ ಕೇಸ್ ಮತ್ತು ಸಾವು ಹೆಚ್ಚಾಗಿದ್ದ ಸಂದರ್ಭದಲ್ಲಿ ಸರ್ಕಾರ ತೆಗೆದುಕೊಂಡ ಕ್ರಮಗಳು, ಲಾಕ್ಡೌನ್ ಮತ್ತು ಕಂಟೈನ್ಮೆಂಟ್ ಮಾಡಿ ವೈರಸ್ ಮ್ಯೂಂಟೆಟ್ ಆಗದಂತೆ ಮಾಡಿರುವುದು. ದೇಶದಲ್ಲಿ ಹೊಸ ಹೊಸ ವೆರಿಯಂಟ್ ಕಾಣಿಸಿಕೊಂಡರೂ ಅಷ್ಟೊಂದು ವೇಗವಾಗಿ ಹಬ್ಬುವ ವೈರಸ್ ಅಲ್ಲ. ಡೆಲ್ಟಾ ಮತ್ತು ಡೆಲ್ಟಾ ಪ್ಲಸ್ ವೈರಸ್ ತೀವ್ರತೆ ಕಡಿಮೆ ಆಗಿದೆ. ಇವು ಮೂರನೇ ಅಲೆ ವಿಳಂಬಕ್ಕೆ ಕಾರಣವಾಗಿವೆ.
3ನೇ ಅಲೆ ಭೀಕರತೆ ಇರಲ್ವಾ?
ಕೊರೊನಾ ಲಸಿಕೆ ಭಾಗಶಃ ಜನರಿಗೆ ಸಿಂಗಲ್ ಹಾಗೂ ಗಣನೀಯ ಪ್ರಮಾಣದಲ್ಲಿ ಡಬಲ್ ಡೋಸ್ ಮುಗಿದಿದೆ. ಚಿಕಿತ್ಸೆ ವಿಧಾನವೂ ಮತ್ತಷ್ಟು ಉನ್ನತೀಕರಣ ಕಂಡು ಕೊಂಡಿದೆ. ಜನರಲ್ಲಿ ಕೊರೊನಾ ಜಾಗೃತಿ ಸಹ ಹೆಚ್ಚಿನ ಪ್ರಮಾಣದಲ್ಲಿ ಪಸರಿಸಿದೆ. ಮಾಸ್ಕ್ ಹಾಕುವ ಪ್ರಮಾಣ ಹೆಚ್ಚಳವಾಗಿದೆ. ಎರಡನೇ ಅಲೆ ವೇಳೆ ಬಹುತೇಕರಿಗೆ ಸೋಂಕು ಹರಡಿದ ಹಿನ್ನೆಲೆಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಳವಾಗಿದೆ. ಹೀಗಾಗಿ ಕೊರೊನಾ 3ನೇ ಅಲೆ ಬಂದರೂ 2ನೇ ಅಲೆಯಷ್ಟು ಭೀಕರತೆ ಇರುವುದಿಲ್ಲ ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ:ರಾತ್ರಿ ರಾಜಕಾರಣ ಮಾಡುವ ಸಂಸ್ಕೃತಿ ಬಿಜೆಪಿಯದ್ದಲ್ಲ ಕಾಂಗ್ರೆಸ್ಸಿನದ್ದು: ಸಂಜಯ್ ಪಾಟೀಲ್
ಕೊರೊನಾ ರೋಗ ಲಕ್ಷಣ ಪತ್ತೆ ಸಮಯದಲ್ಲೇ ತೀಕ್ಷ್ಣ ಕ್ರಮ ವಹಿಸಲಾಗುತ್ತಿದೆ. ಕ್ಲಸ್ಟರ್ ಗಳನ್ನು ಗುರುತಿಸಿ ಪ್ರಾಥಮಿಕ ಹಂತದಲ್ಲಿ ನಿಯಂತ್ರಣ ಮಾಡಲಾಗುತ್ತಿದೆ. ಕೊರೊನಾ ಕೇಸ್ ಕಡಿಮೆಯಾದರೂ ಟೆಸ್ಟ್ ಪ್ರಮಾಣ ಹೆಚ್ಚಿನ ಸಂಖ್ಯೆಯಲ್ಲಿದೆ. ಕೊರೊನಾ ಮುನ್ನಚ್ಚರಿಕೆಗಾಗಿ ಬೆಡ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಕೇಸ್ ಕಂಡು ಬಂದರೂ ಶೀಘ್ರದಲ್ಲೇ ಕ್ರಮ ಜರುಗಿಸಲಾಗುತ್ತಿದೆ. ಇದರಿಂದಾಗಿ 3ನೇ ಅಲೆ ಅಪ್ಪಳಿಸುವುದು ಬಹುತೇಕ ಅನುಮಾನ ಎನ್ನಲಾಗುತ್ತಿದೆ.