ದಾವಣಗೆರೆ: ರಾಜ್ಯದಲ್ಲಿ ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಯುತ್ತಿದ್ದು, ದಿನನನಿತ್ಯ ಗ್ರಾಮೀಣ ಭಾಗಗಳಲ್ಲಿ ಹೈಡ್ರಾಮಾಗಳು ನಡೆಯುತ್ತಿವೆ. ನನಗೆ ಇಂಜೆಕ್ಷನ್ ಬೇಡ, ನನ್ನ ಮಕ್ಕಳಿಗೆ ಅನ್ನ ಮಾಡಿಕೊಡುವವರು ಯಾರೂ ಇಲ್ಲ ಎಂದು ಮಹಿಳೆಯೊಬ್ಬರು ಲಸಿಕೆ ಹಾಕಿಸಿಕೊಳ್ಳಲು ಹಿಂಜರಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ದಾವಣಗೆರೆ ತಾಲೂಕಿನ ಅಣಜಿ ಗ್ರಾಮದಲ್ಲಿ ನಾನು ಇಂಜೆಕ್ಷನ್ ಮಾಡಿಸಿಕೊಳ್ಳುವುದಿಲ್ಲ ಎಂದು ಮಹಿಳೆ ಹೈಡ್ರಾಮ ಮಾಡಿದ್ದಾರೆ. ಮಹಿಳೆಯ ಕ್ವಾಟ್ಲೆಗೆ ಅಧಿಕಾರಿಗಳು ರೋಸಿ ಹೋಗಿದ್ದಾರೆ. ನಾನು ಬೆಂಗಳೂರಿನಲ್ಲಿ ರವಿ ಡಾಕ್ಟರ್ ಬಳಿ ತೋರಿಸ್ಕೋತೀವಿ. ನಂಗೆ ಏನೂ ಆಗಿಲ್ಲ ತುಂಬಾ ಚೆನ್ನಾಗಿದ್ದೀನಿ ಎಂದು ಅಕ್ಕಮ್ಮ ಹಠಕ್ಕೆ ಬಿದ್ದರು. ತಹಶೀಲ್ದಾರ್ ಗಿರೀಶ್, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ಮನವೊಲಿಸಿದರೂ ಆಕೆ ಕ್ಯಾರೇ ಎಂದಿಲ್ಲ. ಇದನ್ನೂ ಓದಿ: ನಮ್ಗೆ ಲಸಿಕೆ ಕೊಡ್ಬೇಡಿ, ನಮ್ಮ ಮೇಲೆ ದೇವರು ಬಂದಿದ್ದಾರೆ – ಯಾದಗಿರಿಯಲ್ಲಿ ಹೈಡ್ರಾಮಾ
ನನಗೆ ಬಿಪಿ ಇದೆ, ಆ ಮಾತ್ರೆ ಬಿಟ್ಟು ಮತ್ಯಾವುದೇ ಗುಳಿಗೆ ತೆಗೆದುಕೊಳ್ಳುವುದಿಲ್ಲ. ನನಗೆ ಏನಾದರೂ ಅದರೆ ನೀವೇ ಕಾರಣ ಆಗ್ತಿರಾ ಎಂದು ಪಟ್ಟು ಹಿಡಿದರು. ಈ ವೇಳೆ ತಹಶೀಲ್ದಾರ್ ಗಿರೀಶ್, ನಿನಗೆ ಏನೂ ಆಗುವುದಿಲ್ಲ, ನಾನು ಇರುತ್ತೇನೆ ಎಂದು ಧೈರ್ಯ ಹೇಳಿ ಲಸಿಕೆ ಹಾಕಿಸಿದ್ದಾರೆ. ಒಟ್ಟಿನಲ್ಲಿ ದಾವಣಗೆರೆ ತಹಶೀಲ್ದಾರ್ ಗಿರೀಶ್ ನೇತೃತ್ವದಲ್ಲಿ ಲಸಿಕಾ ಅಭಿಯಾನ ನಡೆಯುತ್ತಿದ್ದು, ಗ್ರಾಮಗಳಲ್ಲಿ ಲಸಿಕೆ ಪಡೆಯದವರ ಬಳಿ ಖುದ್ದು ಹೋಗಿ ಮನವೊಲಿಸುವ ಕೆಲಸ ಮಾಡುತ್ತಿದ್ದಾರೆ. ಇದನ್ನೂ ಓದಿ: ಕೆರೆ ನೋಡಲು ಬಂದವರಿಗೆ ಕೊರೊನಾ ವ್ಯಾಕ್ಸಿನ್