– ಉಳಿದ ಜಿಲ್ಲೆಗಳಲ್ಲೂ ಶೀಘ್ರವೇ ಲ್ಯಾಬ್ ಸೌಲಭ್ಯ
ಬೆಂಗಳೂರು: ಕೊರೊನಾ ಲಕ್ಷಣ ಪತ್ತೆಗೆ ಇಂದಿನಿಂದ ಕಲಬುರಗಿಯಲ್ಲಿ ಪರೀಕ್ಷಾ ಕೇಂದ್ರ ಆರಂಭ ಮಾಡುವುದಾಗಿ ಆರೋಗ್ಯ ಸಚಿವ ಶ್ರೀರಾಮುಲು ಹೇಳಿದರು.
ವಿಧಾನಸೌಧದಲ್ಲಿ ಶೂನ್ಯವೇಳೆಯಲ್ಲಿ ಕೊರೊನಾ ಕುರಿತು ನಡೆದ ಚರ್ಚೆ ಬಳಿಕ ಸಚಿವ ಶ್ರೀರಾಮುಲು ಉತ್ತರಿಸಿದರು. ಇಂದೇ ಕಲಬುರಗಿಯಲ್ಲಿ ಪ್ರಯೋಗಾಲಯ ಪ್ರಾರಂಭವಾಗುತ್ತಿದೆ ಎಂದು ಹೇಳಿದರು.
ರಾಜ್ಯದಲ್ಲಿ ಇದೂವರೆಗೆ 5 ಪ್ರಯೋಗಾಲಯಗಳನ್ನು ಪ್ರಾರಂಭಿಸಲಾಗಿದೆ. ಬೆಂಗಳೂರು 2, ಶಿವಮೊಗ್ಗ, ಹಾಸನ ಮತ್ತು ಮೈಸೂರುಗಳಲ್ಲಿ ತಲಾ 1 ಪರಿಕ್ಷಾ ಲ್ಯಾಬ್ ಗಳು ಇವೆ. ಉಳಿದ ಜಿಲ್ಲೆಗಳಲ್ಲೂ ಸದ್ಯದಲ್ಲೇ ಪರೀಕ್ಷಾ ಲ್ಯಾಬ್ ತೆರೆಯುತ್ತೇವೆ. ಬೆಳಗಾವಿ, ಮಂಗಳೂರು, ಬಳ್ಳಾರಿ, ಬೀದರ್, ಹುಬ್ಬಳ್ಳಿ, ರಾಯಚೂರು ಗಳಲ್ಲೂ ಶೀಘ್ರದಲ್ಲೇ ಲ್ಯಾಬ್ಗಳು ಬರಲಿವೆ. ಮಂಗಳೂರಿನಲ್ಲಿ ಪ್ರಯೋಗಾಲಯ ಸ್ಥಾಪನೆಗೆ ಉಪಕರಣ ಖರೀದಿಗೆ ಅನುಮತಿ ನೀಡಿದ್ದೇವೆ ಎಂದು ಇದೇ ವೇಳೆ ಆರೋಗ್ಯ ಸಚಿವರು ತಿಳಿಸಿದರು. ಇದನ್ನೂ ಓದಿ: ಮತ್ತೆರಡು ಪಾಸಿಟಿವ್ – ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ 13ಕ್ಕೆ ಏರಿಕೆ
ಭೀತಿಯಲ್ಲಿ ಕಲಬುರಗಿ:
ಕಲಬುರಗಿಯಲ್ಲಿ ಸಿದ್ದಿಕ್ ಸಾವು ಬಳಿಕ ಭೀತಿ ಹೆಚ್ಚಳವಾಗಿದೆ. ಕೆಮ್ಮು, ನೆಗಡಿ ಬಂದವರೆಲ್ಲ ಭೀತಿಯಿಂದ ಪರೀಕ್ಷೆ ಮಾಡಿಸಿಕೊಳ್ತಿದ್ದಾರೆ. ಹೀಗಾಗಿ ಕಲಬುರಗಿಯಲ್ಲಿ ಎಲ್ಲ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ತಿದ್ದೇವೆ. ಬಹಳಷ್ಡು ಜನರನ್ನು ಪರೀಕ್ಷಗೆ ಒಳಪಡಿಸುತ್ತಿದ್ದೇವೆ. ಏರ್ ಪೋರ್ಟ್ ಗಳಲ್ಲಿ ಇದೂವರೆಗೆ ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ಪರೀಕ್ಷಿಸಲಾಗಿದೆ ಎಂದು ಸಚಿವರು ಹೇಳಿದರು.