ರಾಯಚೂರು: ಕೊರೊನಾ ವೈರಸ್ ಸೋಂಕಿನ ಭೀತಿಗೆ ಇಡೀ ದೇಶ ಲಾಕ್ಡೌನ್ ಆಗಿರುವ ಹಿನ್ನೆಲೆ ಜಿಲ್ಲೆಯಲ್ಲಿ ಊಟವಿಲ್ಲದೆ ಮಂಗಳಮುಖಿಯರು ಪರದಾಡುತ್ತಿದ್ದಾರೆ.
ಸಿಂಧನೂರು ನಗರದ ಸುಕಾಲಪೇಟೆಯಲ್ಲಿರುವ 30ಕ್ಕೂ ಹೆಚ್ಚು ಮಂಗಳಮುಖಿಯರು ದಯವಿಟ್ಟು ಸಹಾಯ ಮಾಡಿ ನಮ್ಮನ್ನೂ ಇತರರಂತೆ ಪರಿಗಣಿಸಿ ಅಂತ ಗೋಗರೆದಿದ್ದಾರೆ. ಭಿಕ್ಷಾಟನೆ ಮಾಡಿ ಬದುಕುತ್ತಿದ್ದ ಮಂಗಳಮುಖಿಯರಿಗೆ ಲಾಕ್ಡೌನ್ ನಿಂದ ಭಿಕ್ಷಾಟನೆಗೂ ಬ್ರೇಕ್ ಬಿದ್ದಿದ್ದರಿಂದ ಊಟಕ್ಕೆ ತೊಂದರೆಯಾಗಿದೆ. ಕಾಟಾಚಾರಕ್ಕೆ ಒಂದು ಬಾರಿ ಊಟ ಕೊಟ್ಟಿರುವ ತಾಲೂಕು ಆಡಳಿತ ಅವರ ಕಡೆ ಗಮನ ಹರಿಸಿರಲಿಲ್ಲ. ನಿತ್ಯ ಊಟ, ಇಲ್ಲವೆ ಪಡಿತರ ಕೊಡುವಂತೆ ಮಂಗಳಮುಖಿಯರು ಒತ್ತಾಯಿಸಿದ್ದಾರೆ.
ದಯವಿಟ್ಟು ತಾರತಮ್ಯ ಮಾಡಬೇಡಿ ಎಲ್ಲರಂತೆ ನಮ್ಮಕಡೆ ಗಮನಹರಿಸಿ. ಕೂಡಲೆ ನಮ್ಮ ನೆರವಿಗೆ ಧಾವಿಸಿ ನಮಗೆ ಊಟ ಕೊಡಿ ಅಂತ ತಾಲೂಕು ಆಡಳಿತಕ್ಕೆ ಮಂಗಳಮುಖಿಯರು ಅಂಗಲಾಚಿದ್ದಾರೆ. ಮಂಗಳಮುಖಿಯರು ವಾಸಿಸುತ್ತಿರುವ ಸ್ಥಳಕ್ಕೆ ಭೇಟಿ ನೀಡಿರುವ ಸಿಂಧನೂರು ತಹಶೀಲ್ದಾರ್ ಮಂಜುನಾಥ್ ಸದ್ಯ ಊಟಕ್ಕೆ ವ್ಯವಸ್ಥೆ ಮಾಡಿದ್ದು, ಮುಂದೆ ಮಂಗಳಮುಖಿಯರಿಗೆ ಪಡಿತರ ವಿತರಿಸುವುದಾಗಿ ಭರವಸೆ ನೀಡಿದ್ದಾರೆ.