ತಿರುವನಂತಪುರಂ: ಕೊರೊನಾ ತಡೆಯಲು ದೇಶಾದ್ಯಂತ ಲಾಕ್ಡೌನ್ ಆಗಿದ್ದು, ಮದ್ಯ ಮಾರಾಟ ಕೂಡ ನಿಷೇಧಿಸಲಾಗಿದೆ. ಹೀಗಿರುವಾಗ ವ್ಯಕ್ತಿಯೊಬ್ಬ ಮದ್ಯ ಇಲ್ಲದೆ ಖಿನ್ನತೆಗೆ ಒಳಗಾಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೇರಳದ ತ್ರಿಸೂರ್ ಜಿಲ್ಲೆಯ ಕುನ್ನಾಕುಲಂನಲ್ಲಿ ನಡೆದಿದೆ.
ಸನೋಜ್ ಕುಲಂಗಾರಾ(38) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಕೊರೊನಾ ತಡೆಯಲು ಎಲ್ಲರೂ ಮನೆಯಲ್ಲಿ ಇರಲಿ ಎಂದು ಪ್ರಧಾನಿ ಮೋದಿ 21 ದಿನ ಲಾಕ್ಡೌನ್ ಘೋಷಣೆ ಮಾಡಿದ ನಂತರ ಕೇರಳ ಸರ್ಕಾರ ಸಂಪೂರ್ಣವಾಗಿ ಮದ್ಯ ಬ್ಯಾನ್ ಮಾಡಿದೆ. ಹೀಗಿರುವಾಗ ಸನೋಜ್ ಮದ್ಯ ಸೇವಿಸದೇ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಬಗ್ಗೆ ಆತನ ಕುಟುಂಬಸ್ಥರು ಪ್ರತಿಕ್ರಿಯಿಸಿ, ಸನೋಜ್ ಕುಡುಕನಾಗಿದ್ದು, ಮದ್ಯ ಸಂಪೂರ್ಣವಾಗಿ ಬ್ಯಾನ್ ಆಗಿದ್ದಾಗ ಆತ ಖಿನ್ನತೆಗೆ ಒಳಗಾಗಿದ್ದನು ಎಂದು ಪೊಲೀಸರ ಬಳಿ ತಿಳಿಸಿದ್ದಾರೆ. ಸದ್ಯ ಪೊಲೀಸರು ಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದಕ್ಕೂ ಮೊದಲು ನಾಲ್ಕು ಮಂದಿ ಮದ್ಯ ಸೇವಿಸದೇ ಖಿನ್ನತೆಗೆ ಒಳಗಾಗಿ ತಿರುವನಂತಪುರಂ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದು ಕೇರಳ ಪ್ರವಾಸೋದ್ಯಮ ಸಚಿವ ಕಡಕಂಪಲ್ಲಿ ಸುರೇಂದ್ರನ್ ಎಂದು ತಿಳಿಸಿದ್ದಾರೆ.