ಹಾವೇರಿ: ಅಡುಗೆ ಎಣ್ಣೆ ಟ್ಯಾಂಕರ್ ಪಲ್ಟಿಯಾಗಿ ಗಾಯಾಳುಗಳು ನರಳುತ್ತಿದ್ದರೂ ಅಂಬ್ಯುಲೆನ್ಸ್ ನಲ್ಲೇ ಬಿಟ್ಟು ಸಿಬ್ಬಂದಿ ಅಡುಗೆ ಎಣ್ಣೆ ತುಂಬಲು ನಿಲ್ಲುವ ಮೂಲಕ ಅಮಾನವೀಯವಾಗಿ ವರ್ತಿಸಿದ್ದಾರೆ.
ಜಿಲ್ಲೆಯ ಹಾನಗಲ್ ತಾಲೂಕಿನ ಗೊಂದಿ ಕ್ರಾಸ್ ಬಳಿ ಈ ಘಟನೆ ನಡೆದಿದ್ದು, ಚಾಲಕನ ನಿಯಂತ್ರಣ ತಪ್ಪಿ ಅಡುಗೆ ಎಣ್ಣೆ ತುಂಬಿದ್ದ ಟ್ಯಾಂಕರ್ ಪಲ್ಟಿಯಾಗಿದೆ. ಟ್ಯಾಂಕರ್ ನಲ್ಲಿದ್ದ ಮೂವರು ಗಂಭೀರ ಗಾಯಗೊಂಡಿದ್ದರು. ಸ್ಥಳೀಯರು ಆ್ಯಂಬುಲೆನ್ಸ್ ಗೆ ಕರೆಮಾಡಿದ್ದಾರೆ. ಸ್ಥಳಕ್ಕೆ ಆ್ಯಂಬುಲೆನ್ಸ್ ಆಗಮಿಸಿದರೂ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯದೆ, ಸಿಬ್ಬಂದಿಯೂ ಎಣ್ಣೆ ತುಂಬಿಕೊಳ್ಳುವುದರಲ್ಲಿ ನಿರತರಾಗಿದ್ದರು.
ಅಡುಗೆ ಎಣ್ಣೆ ತುಂಬಿಕೊಳ್ಳಲು ಸಿಬ್ಬಂದಿ ಹಾಗೂ ಗ್ರಾಮದ ಜನರು ಮುಗಿಬಿದ್ದದ್ದರು. ಸ್ಥಳೀಯರ ಜೊತೆಗೆ ಅಂಬ್ಯುಲೆನ್ಸ್ ನಲ್ಲಿದ್ದ ಸಿಬ್ಬಂದಿ ಸಹ ಡಬ್ಬಿಗಳಲ್ಲಿ ಎಣ್ಣೆ ತುಂಬಿಕೊಳ್ಳುವಲ್ಲಿ ನಿರತರಾಗಿದ್ದರು. ಇತ್ತ ಗಾಯಾಳುಗಳು ರಸ್ತೆಯಲ್ಲೇ ನರಳಾಡುತ್ತಿದ್ದರು. ಸ್ಥಳೀಯರು ಇದನ್ನು ವಿಡಿಯೋ ಮಾಡಿದ್ದಾರೆ. ನಂತರ ಗಾಯಾಳುಗಳನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಡೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಸ್ಥಳೀಯರು ಸಹ ಮಾನವೀಯತೆಯನ್ನು ಮರೆತು ಗಾಯಾಳುಗಳನ್ನು ರಸ್ತೆಯಲ್ಲಿಯೇ ಬಿಟ್ಟು ಅಡುಗೆ ಎಣ್ಣೆ ತುಂಬಿಕೊಳ್ಳಲು ಪರದಾಡುತ್ತಿದ್ದರು. ಟ್ಯಾಂಕರ್ ಪಲ್ಟಿಯಾಗುತ್ತಿದ್ದಂತೆ ಕೆಳಗೆ ಬೀಳುತ್ತಿದ್ದ ಅಡುಗೆ ಎಣ್ಣೆಯನ್ನು ತುಂಬಿಕೊಳ್ಳಲು ಜನ ಮುಗಿಬಿದ್ದಿದ್ದರು. ಈ ವೇಳೆ ನೂಕುನುಗ್ಗಲು ಸಂಭವಿಸಿತ್ತು. ಎಣ್ಣೆ ತುಂಬಿಕೊಳ್ಳಲು ಬಿಂದಿಗೆ, ಡಬ್ಬಿ, ಕ್ಯಾನ್, ಡ್ರಮ್ ಹಿಡಿದುಕೊಂಡು ಜನ ಮುಗಿಬಿದ್ದಿದ್ದರು.